ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬೆಣಕಲ್ ಗ್ರಾಮದಲ್ಲಿ ಕೂಡಲೇ ಅಕ್ರಮ ಮದ್ಯ ಮಾರಾಟ ಸ್ಥಗಿತ ಗೊಳಿಸುವಂತೆ ಆಗ್ರಹಿಸಿ ಗ್ರಾಮದ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಹಾಗೂ ಗ್ರಾಮ ದೈವಸ್ಥರ ಸಮಿತಿಯ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದೈವಸ್ಥರ ಸಮಿತಿ ಅಧ್ಯಕ್ಷ ಸೊನ್ನದ ಕೊಟ್ರೇಶ್ ಮಾತನಾಡಿ, ಗ್ರಾಮದ ಪ್ರತಿ ಅಂಗಡಿಗಳಲ್ಲಿ ಪಡಿತರ ಸಾಮಗ್ರಿಗಳಂತೆ ಮದ್ಯದ ಸೀಸೆಗಳು ಮಾರಾಟವಾಗು ತ್ತಿದ್ದರೂ ಅಬಕಾರಿ ಇಲಾಖೆ ಕಾನೂನು ಕ್ರಮ ಜರುಗಿಸುವ ಬದಲಾಗಿ ಮದ್ಯ ಮಾರಾಟಗಾರರಿಗೆ ಪ್ರೋತ್ಸಾಹಿಸುತ್ತಿದೆ ಎಂದು ದೂರಿದರು.
ಕಾನೂನುಬಾಹಿರವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಪರಿಣಾಮವಾಗಿ ಗ್ರಾಮದ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕಾಗಿರುವ ಯುವಕರು ಮದ್ಯಪಾನಕ್ಕೆ ದಾಸರಾಗು ತ್ತಿದ್ದಾರೆ. ಆ ಮೂಲಕ ಅಮೂಲ್ಯವಾದ ತಮ್ಮ ಯೌವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಕುಡಿದ ಅಮಲಿನಲ್ಲಿ ಯುವಕರು ಸಮಾಜ ವಿರೋಧಿ ಮತ್ತು ಕೆಳ ಮಟ್ಟದ ವರ್ತನೆಗಳನ್ನು ತೋರುತ್ತಿದ್ದಾರೆ. ಪೋಷಕರನ್ನು ಹಣಕ್ಕಾಗಿ ಪೀಡಿಸು ವುದು, ಮನೆಯ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದು ಮಾರುವ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚುತ್ತಿವೆ ಹೀಗೆ ಮುಂದುವರಿದರೆ ಮದ್ಯದ ಅಮಲು ಲೈಂಗಿಕ ಅಪಚಾರಕ್ಕೆ ಕಾರಣ ವಾಗಬಹುದು ಎಂದು ಎಚ್ಚರಿಸಿದರು.
ಕೂಡಲೇ ಅಕ್ರಮ ಕಾನೂನು ಬಾಹಿರ ಮದ್ಯ ಮಾರಾಟ ತಡೆಗೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸುವ ಮನವಿಯನ್ನು ತಹಸೀಲ್ದಾರ್ ನಾಗರಾಜ ಭಟ್ ಅವರಿಗೆ ಸಲ್ಲಿಸಿದರು.
ತಾ.ಪಂ.ಸದಸ್ಯ ಬೆಣಕಲ್ ಪ್ರಕಾಶ್, ಗ್ರಾ.ಪಂ.ಸದಸ್ಯ ಎಚ್.ಮೈಲಾರೆಪ್ಪ, ಎನ್.ವೃಷಭೇಂದ್ರ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿನ ಎಚ್.ಗಂಗಮ್ಮ, ದೈವಸ್ಥರ ಸಮಿತಿಯ ಎಚ್.ಪ್ರಕಾಶ್, ಬೆಳಗೇರಿ ಹೇಮಣ್ಣ ಸಹಿತ ಮತ್ತಿತರೆ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.