ಚಿಕ್ಕಬಳ್ಳಾಪುರ: `ಸರ್ಕಾರಗಳು ಗುಟ್ಕಾ, ಸಿಗರೇಟು ಮದ್ಯಗಳಿಂದ ಲಾಭ ಪಡೆಯುತ್ತಾ ಜನರ ಪ್ರಾಣದ ಜತೆ ಚಲ್ಲಾಟವಾಡುತ್ತಿವೆ ಎಂದು ನಿವೃತ್ತ ಆರೋಗ್ಯ ಶಿಕ್ಷಕ ಕ್ಯಾತಪ್ಪ ದೂರಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಮಾದಕ ವಸ್ತು ಸೇವನೆ ದುಷ್ಪರಿಣಾಮ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ವ್ಯಸನದಿಂದ ಸಾಮಾಜಿಕ ವಿಘಟನೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಸಂಪತ್ಕುಮಾರ್ ಮಾತನಾಡಿ ಕಾಲೇಜಿನ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್, ಗುಟ್ಕಾ ಮುಂತಾದ ಮಾದಕ ದ್ರವ್ಯಗಳನ್ನು ಮಾರಾಟ ಮಾಡಬಾರದೆಂದು ಕಾನೂನಿದ್ದರೂ ಉಲ್ಲಂಘಿಸಲಾಗುತ್ತಿದೆ ಎಂದು ಹೇಳಿದರು.
ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಶಿವಮೂರ್ತಿ ವಿದ್ಯಾರ್ಥಿಗಳಿಗೆ ಉತ್ತಮ ನಾಗರಿಕರಾಗಿ, ವಿದ್ಯೆ ಕಲಿತು ಸಮಾಜಕ್ಕೆ ಮಾದರಿಯಾಗಿ ಬದುಕುತ್ತೇವೆ ಎಂದು ಪ್ರಮಾಣ ವಚನ ಬೋಧಿಸಿದರು.ಉಪನ್ಯಾಸಕ ಸಿ.ಎಲ್.ಸತೀಶ್ಕುಮಾರ್, ಕಾಲೇಜು ಸಿಬ್ಬಂದಿ ಹಾಗೂ ಉಪನ್ಯಾಸಕರು ಈ ಸಂದರ್ಭದಲ್ಲಿ ಹಾಜರಿದ್ದರು.