ರಾಯಚೂರು: ಮಾನ್ವಿ ತಾಲ್ಲೂಕಿನ ಸಿರವಾರ ಗ್ರಾಮದ ಶಾಲೆ ಮುಂದೆ ನಡೆಸುತ್ತಿರುವ ಸಾಮ್ರಾಟ ಮದ್ಯದ ಅಂಗಡಿ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಅಬಕಾರಿ ಕಚೇರಿ ಎದುರು ಜೈ ಕನ್ನಡ ರಕ್ಷಣಾ ವೇದಿಕೆ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಧರಣಿ ನಡೆಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಹಾಗೂ ಅಬಕಾರಿ ಅಧಿಕಾರಿಗಳು ಸ್ಥಳಾಂತರಿಸಲು ಆದೇಶ ನೀಡಿದರೂ ಆದೇಶಕ್ಕೆ ಮಾನ್ಯತೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಸಾಮ್ರಾಟ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಬೇಕು, ಕಾನೂನು ಗಾಳಿಗೆ ತೂರಿದ ಮದ್ಯದ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಮದ್ಯದ ಅಂಗಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಅಬಕಾರಿ ಇಲಾಖೆಯ ತಾಲ್ಲೂಕು ಹಾಗೂ ಜಿಲ್ಲೆಯ ಅಧಿಕಾರಿಗಳನ್ನು ಅಮಾನತ್ಗೊಳಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನಸರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಸಂತಕುಮಾರ, ಯುವ ಘಟಕದ ಅಧ್ಯಕ್ಷ ವೆಂಕಟೇಶ ನೇಕಾರ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ರಾಮಪ್ಪ, ಉಮೇಶಗೌಡ ಶ್ರೀಕಾಂತ ಗುತ್ತೇದಾರ, ಶರಣು, ವೆಂಕಟಸ್ವಾಮಿ, ರಮೇಶ, ಜಗದೀಶ, ಆಂಜನೇಯ, ಈಶ್ವರ, ನರಸಪ್ಪ, ಆಂಜನೇಯ ಎಂ, ರಾಘವೇಂದ್ರ ಆರ್. ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.