ಬಾಗಲಕೋಟೆ: ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಪ್ರಸಕ್ತ ಸಾಲಿನ `ಸಂಯಮ~ ಪ್ರಶಸ್ತಿಯನ್ನು `ಮಹಾಂತ ಜೋಳಿಗೆ~ಯ ಹರಿಕಾರ ಇಳಕಲ್ನ ಡಾ. ಮಹಾಂತ ಶ್ರಿ ಅವರಿಗೆ ಸೋಮವಾರ ಇಲ್ಲಿ ಪ್ರದಾನ ಮಾಡಲಾಯಿತು. ಫಲಕ, 1 ಲಕ್ಷ ರೂಪಾಯಿ ನಗದು ಒಳಗೊಂಡ ಪ್ರಶಸ್ತಿಯನ್ನು ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು ಪ್ರದಾನ ಮಾಡಿದರು.
`ಕರ್ನಾಟಕವನ್ನು ಮದ್ಯಮುಕ್ತ ರಾಜ್ಯವನ್ನಾಗಿ ಮಾಡಲು ಮತ್ತು ಸಂಯಮ ಸಮಾಜ ನಿರ್ಮಾಣ ಉದ್ದೇಶದಿಂದ ಮದ್ಯಪಾನವನ್ನು ಕಡ್ಡಾಯವಾಗಿ ನಿಷೇಧಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕಾನೂನು ರೂಪಿಸಬೇಕು~ ಎಂದು ಸಿದ್ದೇಶ್ವರ ಸ್ವಾಮೀಜಿ ಸಲಹೆ ಮಾಡಿದರು.
`ಜನತೆಗೆ ಮದ್ಯವೆಂಬ ವಿಷ ಕೊಟ್ಟು ದೇಶವನ್ನು ಶ್ರೀಮಂತ ಮಾಡುವ ಅಗತ್ಯವಿಲ್ಲ. ದೇಹ ಮತ್ತು ಮನಸ್ಸಿಗೆ ಮಾರಕವಾದ ಮದ್ಯಪಾನ ಮಾಡುವ ಬದಲು, ಜನತೆ ತಮ್ಮ ಆರೋಗ್ಯ ಉತ್ತಮಗೊಳಿಸುವ ಹಾಲು, ನೀರು, ಎಳನೀರು, ಕಬ್ಬಿನ ಹಾಲು ಕುಡಿಯಬೇಕು~ ಎಂದರು.
`ಸುನಾಮಿ, ಭೂಕಂಪ ಮತ್ತಿತರ ಪ್ರಾಕೃತಿಕ ವಿಕೋಪದಿಂದ ಆಗುವ ಸಾವು-ನೋವಿಗಿಂತ ಮದ್ಯಪಾನದಿಂದ ವರ್ಷಕ್ಕೆ ಲಕ್ಷಾಂತರ ಜನ ಮರಣ ಹೊಂದುತ್ತಿದ್ದಾರೆ~ ಎಂದು ಆತಂಕ ವ್ಯಕ್ತಪಡಿಸಿದರು.
ನೈತಿಕ ಅಧಃಪತನ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹಾಂತಶ್ರೀ, `ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರ ಇಂದು ನೈತಿಕ ಅಧಃಪತನದತ್ತ ಸಾಗುತ್ತಿದೆ~ ಎಂದರು.
`ಮಹಾಂತ ಜೋಳಿಗೆ~ ಸಾಕ್ಷ್ಯ ಚಿತ್ರವನ್ನು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಬಿಡುಗಡೆ ಮಾಡಿದರು. ಶಾಸಕ ವೀರಣ್ಣ ಚರಂತಿಮಠ ಅಭಿನಂದನಾ ಭಾಷಣ ಮಾಡಿದರು. ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಆಶಯ ಭಾಷಣ ಮಾಡಿದರು.
ಚರಂತಿಮಠದ ಜಗದ್ಗುರು ಪ್ರಭುಸ್ವಾಮಿ ಸಾನಿಧ್ಯ ವಹಿಸಿದ್ದರು. ಇಳಕಲ್-ಸವದಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ, ಬೆಂಗಳೂರಿನ ಗಾಂಧಿಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ. ಶ್ರಿನಿವಾಸಯ್ಯ, ಮಂಡಳಿ ಕಾರ್ಯದರ್ಶಿ ಎಚ್.ಬಿ.ದಿನೇಶ್, ವಾರ್ತಾ ಇಲಾಖೆ ಬೆಳಗಾವಿ ವಿಭಾಗದ ಉಪನಿರ್ದೇಶಕ ಬಸವರಾಜ ಕಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.