ಕೊಳ್ಳೇಗಾಲ: ಮಧ್ಯಪಾನ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಜನರು ಅರಿವು ಪಡೆದು ಮದ್ಯಪಾನದಿಂದ ದೂರ ಉಳಿಯಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶ ಲಕ್ಷ್ಮಣ್ರಾವ್ ಮಿಸ್ಕಿನ್ ತಿಳಿಸಿದರು.
ತಾಲ್ಲೂಕಿನ ಸತ್ತೇಗಾಲ ಅಗ್ರಹಾದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಮಹಿಳಾ ಸಮಖ್ಯಾ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮದ್ಯಪಾನ ನಿಷೇಧ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮದ್ಯಪಾನ ನಿಷೇಧ ಕಾಯಿದೆ ಬಗ್ಗೆ ಜನರು ಅರಿವನ್ನು ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ವಿಷಾದಕರ ಸಂಗತಿ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಿ ಮದ್ಯಪಾನ ಮಾರಾಟಕ್ಕೆ ಕಡಿವಾಣ ಹಾಕಬೇಕು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಆನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್, ವಕೀಲ ರಾಜೇಂದ್ರ, ಮಹಿಳಾ ಸಮಖ್ಯಾ ಕಾರ್ಯಕರ್ತೆ ನಾಗಮ್ಮ, ಮಹಿಳಾ ಆರೋಗ್ಯ ಸಹಾಯಕಿ ಶಾಂತಮ್ಮ ಇದ್ದರು.