ಮಧುಗಿರಿ: ಪಟ್ಟಣದ ಕುಡಿಯುವ ನೀರಿನ ಸ್ಥಿತಿ ಸುಧಾರಿಸಲು ವಿಶೇಷ ಹಣಕಾಸು ಯೋಜನೆಯಡಿ ಸರ್ಕಾರ ರೂ 40 ಲಕ್ಷ ಬಿಡುಗಡೆ ಮಾಡಿದೆ.
ರೂ 40 ಲಕ್ಷ ವೆಚ್ಚದಲ್ಲಿ ಈ ಹಿಂದೆ ಕೊರೆದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಪಂಪ್ ಅಳವಡಿಸುವುದು. ಹೊಸದಾಗಿ 6 ಕೊಳವೆ ಬಾವಿ ಕೊರೆಸುವುದು, ಬಸವನಹಳ್ಳಿ ಬಳಿಯ ಪಂಪ್ಹೌಸ್ಗೆ ರೂ 9 ಲಕ್ಷ ವೆಚ್ಚದಲ್ಲಿ ಪಂಪ್ಸೆಟ್ ಅಳವಡಿಸುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಾರುತಿ ಶಂಕರ್ `ಪ್ರಜಾವಾಣಿ'ಗೆ ವಿವರಿಸಿದರು.
ಪಟ್ಟಣದಲ್ಲಿ ಒಟ್ಟು 52 ಕೊಳವೆ ಬಾವಿಗಳಿವೆ. ಹಲವೆಡೆ ನೀರಿನ ಇಳುವರಿ ಕಡಿಮೆಯಾಗಿದೆ. ಸಿದ್ದಾಪುರ ಕೆರೆ ಬತ್ತಿ ಹೋಗಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಕಾಣಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಮಿತವಾಗಿ ನೀರು ಬಳಸಿ, ಬೇಸಿಗೆ ಎದುರಿಸಲು ಸಜ್ಜಾಗಬೇಕು ಎಂದು ಮನವಿ ಮಾಡಿದರು.