ಮಧುಗಿರಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಛಲವಾದಿ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಬಂದ್ ಕರೆಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಒಕ್ಕೂಟದ ಸಾವಿರಾರು ಮಂದಿ ಪುರಭವನದ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಹಕ್ಕೊತ್ತಾಯ ಮೆರವಣಿಗೆ ನಡೆಸಿದರು. ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಭೆ ನಡೆಸಿ, ಉಪವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಉಪವಿಭಾಗಾಧಿಕಾರಿ ಕಚೇರಿ ಮುಂದೆ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಸಾಹಿತಿ ಕೆ.ಬಿ.ಸಿದ್ದಯ್ಯ, ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಶ್ರೀರಾಮ್, ಮಾಜಿ ಶಾಸಕ ಗಂಗಹನುಮಯ್ಯ, ಮುಖಂಡ ಚೇಳೂರು ವೆಂಕಟೇಶ್, ಬಂದಕುಂಟೆ ನಾಗರಾಜು, ಜಿ.ಪಂ ಸದಸ್ಯರಾದ ಕೆಂಚಮಾರಯ್ಯ, ವೈ.ಎಚ್.ಹುಚ್ಚಯ್ಯ, ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಅರ್.ಕೆ.ಧ್ರುವಕುಮಾರ್ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿರುವ ತಾರತಮ್ಯ ನಿವಾರಣೆಗೆ ರಾಜ್ಯ ದಲಿತ ಸಂಘಟನೆಗಳು ನಡೆಸಿದ ಹೋರಾಟದಿಂದ ರಚನೆಗೊಂಡ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸ್ಸನ್ನು ಸರ್ಕಾರ ಶೀಘ್ರ ಜಾರಿಗೊಳಿಸಬೇಕು. ಮಾದಿಗ- ಛಲವಾದಿಗಳು ಸಮರೋಪಾದಿಯಲ್ಲಿ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.
ತುಮಕೂರು ನಗರಸಭಾ ಸದಸ್ಯ ನರಸೀಯಪ್ಪ, ದಲಿತ ಮುಖಂಡರಾದ ವಾಲೇ ಚಂದ್ರಯ್ಯ, ಎಸ್.ಡಿ.ಕೃಷ್ಣಪ್ಪ, ನರಸಿಂಹರಾಜು, ಟಿ.ಸಿ.ಎಚ್.ಕೃಷ್ಣಪ್ಪ, ಎಚ್.ಸಿ.ನರಸೀಯಪ್ಪ, ತಾ.ಪಂ ಅಧ್ಯಕ್ಷೆ ನಾಗಮ್ಮ, ಬೆಲ್ಲದಮಡುಗು ಕೃಷ್ಣಪ್ಪ, ಜೆ.ಸಿ.ತಿಮ್ಮಯ್ಯ, ಎಂ.ವೈ.ಶಿವಕುಮಾರ್, ಐ.ಡಿ.ಹಳ್ಳಿ ನರಸಿಂಹಮೂರ್ತಿ, ಜೀವಿಕ ಡಿ.ಟಿ.ಸಂಜೀವಮೂರ್ತಿ, ಡಿವಿಎಸ್ ಕೋಟೆ ಕಲ್ಲಪ್ಪ, ಮಣೆಗಾರ ಬಂಧು ಜಿಲ್ಲಾ ಸಂಚಾಲಕ ಬೆಳದಮಡುಗು ಶಿವಣ್ಣ, ಎಸ್ಎಸ್ಡಿ ಎನ್ ಬಸ್ತಪ್ಪ, ದೊಡ್ಡೇರಿ ಕಣಿಮಯ್ಯ, ರಾಮಣ್ಣ, ಹೆಂಚಾರಪ್ಪ, ಕಂಬದರಂಗಪ್ಪ, ರಘುನಾಥ್, ರವಿಶಂಕರ್, ರಂಗಪ್ಪ, ಬ್ಯಾಲ್ಯಾ ಮೂರ್ತಿ, ರಂಗಶ್ಯಾಮಯ್ಯ ಮತ್ತಿತರರ ಮುಖಂಡರು ಪಾಲ್ಗೊಂಡಿದ್ದರು.
ಸರ್ಕಾರಿ ಕಚೇರಿಗಳು, ಬ್ಯಾಂಕ್, ಶಾಲಾ ಕಾಲೇಜು ಹಾಗೂ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.