ಮಧುರೆ (ಪಿಟಿಐ): ಕ್ರಿ.ಶ. 1216ರಷ್ಟು ಹಳೆಯದಾದ ಮಧುರೆಯ ಖ್ಯಾತ ಮೀನಾಕ್ಷಿ ದೇವಾಲಯದ ಪೂರ್ವದ ಬದಿಯ ರಾಜಗೋಪುರಕ್ಕೆ ಮಿಂಚಿನ ಹೊಡೆತದಿಂದ ಧಕ್ಕೆ ಉಂಟಾಗಿದೆ ಎಂದು ದೇವಾಲಯ ಮೂಲಗಳು ಶುಕ್ರವಾರ ಇಲ್ಲಿ ತಿಳಿಸಿವೆ.
ಗೋಪುರದ ತುತ್ತ ತುದಿಯ ಅಲಂಕಾರಿಕ 'ಯಾಳಿ ಮುಖಂ'ಗೆ (ಒಂದು ಪೌರಾಣಿಕ ಪ್ರಾಣಿಯ ಮುಖ) ಗುರುವಾರ ರಾತ್ರಿ ಮಿಂಚಿನ ಹೊಡೆತದಿಂದ ಹಾನಿಯಾಗಿದೆ ಎಂದು ದೇವಾಲಯದ ಜಂಟಿ ಆಯುಕ್ತ ಜಯರಾಮನ್ ಹೇಳಿದರು.
ಎಲ್ಲ ನಾಲ್ಕೂ ಗೋಪುರಗಳಿಗೆ ಎರಡು ವರ್ಷಗಳ ಹಿಂದೆ ಮಿಂಚು ತಪ್ಪಿಸುವ ವ್ಯವಸ್ಥೆ ಅಳವಡಿಸಲಾಗಿತ್ತು. ಈ ಉಪಕರಣ ಅಳವಡಿಸಿದ ಬಳಿಕ ನಾಲ್ಕು ಬಾರಿ ಮಿಂಚು ಹೊಡೆದ್ದುದನ್ನು ಅದು ದಾಖಲಿಸಿತ್ತು ಎಂದು ಅವರು ನುಡಿದರು.
150 ಅಡಿ ಎತ್ತರದ ಈ ಗೋಪುರದಲ್ಲಿ ಶಿವಪುರದ ಅಪರೂಪದ ಶಿಲೆಗಳನ್ನು ಬಳಸಿ ನಿರ್ಮಿಸಲಾದ ಅಪೂರ್ವ ಶಿಲ್ಪಗಳಿವೆ. ಮಿಂಚಿನ ಹೊಡೆತದಿಂದ ಯಾಳಿಯ ಕೊಂಬಿಗೆ ಧಕ್ಕೆಯಾಗಿದೆ. 'ಇದು ಸರಿಪಡಿಸಲಾಗದಷ್ಟು ದೊಡ್ಡದಾದ ಹಾನಿ' ಎಂದು ಅವರು ಹೇಳಿದರು.
ಗಾರೆಯಿಂದ ನಿರ್ಮಿಸಲಾಗಿದ್ದ ಶಿಲ್ಪವು ಕೆಳಕ್ಕೆ ಉರುಳಿ ಬಿದ್ದಿದೆ. ಅದನ್ನು ಶೀಘ್ರವೇ ಪುನಃ ಪ್ರತಿಷ್ಠಾಪಿಸಲಾಗುವುದು ಎಂದೂ ಅವರು ಹೇಳಿದರು.