ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಭಾರ ಇಳಿಸಿ ಹಗುರಾಗಿ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಂಸಾರದಲ್ಲಿ ಅತಿ ಹೆಚ್ಚು ನೋವು ನೀಡುವ ಸಂಗತಿ ಎಂದರೆ ನಂಬಿಕೆ ದ್ರೋಹ. ಅದರಲ್ಲೂ ಸಂಗಾತಿಯಿಂದ ಉಂಟಾಗುವ ವಿಶ್ವಾಸ ದ್ರೋಹ. ಪರಸ್ಪರ ಬದ್ಧತೆಯಿಂದ ಜೀವನ ಸಾಗುತ್ತಿರುವಾಗ ಒಂದು  ದಿನ ತನ್ನ ಸಂಗಾತಿ ತಾನು ನಂಬಿದಷ್ಟು ತನಗೆ ಬದ್ಧವಾಗಿಲ್ಲ ಎಂಬ ಸತ್ಯ ತಿಳಿದು ಹೋದರೆ ಎಂಥ ನೋವಾಗುವುದಲ್ಲವೇ? ಅದು ಯಾರ ಬಳಿಯೂ ತೋಡಿಕೊಳ್ಳಲಾಗದ, ಸುಮ್ಮನಿದ್ದು ಅನುಭವಿಸಲೂ ಆಗದ ಸಂಕಟ.

ಇದು ನಿಜಕ್ಕೂ ಸವಾಲಿನ ಸಂಗತಿ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಂತೂ ಇದನ್ನು ಎದುರಿಸುವುದು ಇನ್ನೂ ಕಠಿಣ. ಕುಟುಂಬದ ಮರ್ಯಾದೆಗೆ ಅಂಜುವ ನಾವು, ಸಂಗಾತಿಯಿಂದ ಮೋಸವಾಯಿತು ಎಂಬ ಕಾರಣಕ್ಕೆ ಆ ಸಂಬಂಧವನ್ನು ಅಷ್ಟು ಸುಲಭವಾಗಿ ಹರಿದುಕೊಂಡು ಹೋಗಲಾರೆವು. ಅದರಲ್ಲೂ ಹೆಣ್ಣಿಗೆ ಇಲ್ಲಿರಲಾರೆ, ಅಲ್ಲಿಗೂ ಹೋಗಲಾರೆ ಎಂಬ ಪರಿಸ್ಥಿತಿ.

ತನಗೆ ಸಂಗಾತಿಯಿಂದ ಮೋಸವಾಗುತ್ತಿದೆ ಎಂಬ ಅರಿವು ಹೆಣ್ಣು ಗಂಡು ಇಬ್ಬರಿಗೂ ಸಮಾನವಾಗಿ ನೋವು ಕೊಡುವ ವಿಚಾರ. ಜೀವನದಲ್ಲಿ ಹಲವರು ಇಂಥ ಸಂದರ್ಭಗಳನ್ನು ಎದುರಿಸಿರುತ್ತಾರೆ ಹಾಗೂ ಎದುರಿಸುತ್ತಲೇ ಇರುತ್ತಾರೆ. ಹಾಗಾದರೆ ಅಂಥ ಸನ್ನಿವೇಶಗಳನ್ನು ನಿಭಾಯಿಸುವುದು ಹೇಗೆ?  ಒಂದು ವೇಳೆ ನೀವು ಅಂಥ ಸಂದರ್ಭ ಎದುರಿಸುತ್ತಿದ್ದರೆ ಆ ನೋವಿನಿಂದ ಹೊರ ಬರಲು ಏನು ಮಾಡಬಹುದು?

ನಿಮ್ಮ ಸಂಗಾತಿಯಿಂದ ದ್ರೋಹವಾಗುತ್ತಿದೆ ಎನ್ನಲು ಯಾವುದೋ ಬಲವಾದ ಸಾಕ್ಷಿ ನಿಮಗೆ ಸಿಕ್ಕಿದೆ ಅಂದುಕೊಳ್ಳಿ. ಅಂಥ ಸಂದರ್ಭದಲ್ಲಿ ಭಾವನಾತ್ಮಕವಾಗಿ ತುಂಬ ದೊಡ್ಡ ಆಘಾತಕ್ಕೆ ಒಳಗಾಗುತ್ತೀರಿ. ಪ್ರಶ್ನೆ ಮಾಡುತ್ತೀರಿ, ಜಗಳವಾಗುತ್ತದೆ, ಅಳುತ್ತೀರಿ, ಹಳಹಳಿಸುತ್ತೀರಿ, ಮೋಸ ಹೋದೆ ಎಂದು ಪರಿತಪಿಸುತ್ತೀರಿ. ಮಾನಸಿಕವಾಗಿ, ದೈಹಿಕವಾಗಿ ತೀರಾ ಕುಗ್ಗಿ ಹೋಗುತ್ತೀರಿ.

ಇದೆಲ್ಲ ಆದ ಮೇಲೆ? ನೋವು ಮನದಲ್ಲಿ ಹೆಪ್ಪುಗಟ್ಟುತ್ತದೆ. ಅಲ್ಲಿಯವರೆಗೆ ಅಂದುಕೊಂಡಿದ್ದೆಲ್ಲ ಸುಳ್ಳು ಎಂಬ ಸತ್ಯ ಕಣ್ಣ ಮುಂದೆ ನಿಂತಿರುತ್ತದೆ, ಬದುಕು ಕವಲೊಡೆಯಬೇಕೋ ಇಲ್ಲ ಮತ್ತೆ ಚಿಗುರೊಡೆಯಬೇಕೋ ಎಂಬ ಗೊಂದಲ ಆವರಿಸಿಕೊಳ್ಳುತ್ತದೆ. ಒಂಥರಾ ಎಲ್ಲ ಬಾಗಿಲುಗಳೂ ಮುಚ್ಚಿಹೋದ ಸ್ಥಿತಿ. ಹೀಗಿದ್ದಾಗ ಎಲ್ಲಿಂದ ಶುರು ಮಾಡುವುದು?   

`ಕಳೆದಲ್ಲೇ ಹುಡುಕು' ಎನ್ನುವುದನ್ನು ನಾವೆಲ್ಲ ಕೇಳಿರುತ್ತೇವೆ. ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಇನ್ಯಾರನ್ನೋ ಹತ್ತಿರವಾಗಿಸಿಕೊಂಡಿದ್ದಾರೆ. ಅದೀಗ ನಿಮಗೂ ತಿಳಿದಿದೆ. ನೀವು ನಿಮ್ಮೆಲ್ಲ ಹತಾಶೆ, ನೋವು ಅವಮಾನವನ್ನು ಸಂಗಾತಿಯ ಮೇಲೆ ಕಾರಿದ್ದೀರಿ. ಸಂಗಾತಿ ತಾನು ಮಾಡಿದ್ದು ತಪ್ಪು ಎಂದು ಸರ್ವಥಾ ಒಪ್ಪಿಕೊಂಡಿರುತ್ತಾರೆ.

ನಿಮ್ಮ ನೋವು, ಅಭದ್ರತೆಯ ಭಾವನೆ ಅವರಿಗೆ ಸಂಪೂರ್ಣ ಅರ್ಥವಾಗಿದೆ. ತಾನು ಮಾಡಿದ್ದು ಎಂಥ ದೊಡ್ಡ ಮೋಸ ಎಂಬುದೂ ಅರಿವಾಗಿದೆ. ಅದಕ್ಕಾಗಿ ನಿಜವಾಗಿಯೂ ಮರುಗಿ ಪಶ್ಚಾತ್ತಾಪ ಪಡುತ್ತಿದ್ದರೆ ಅಂಥ ಸಂದರ್ಭದಲ್ಲಿ ನಿಮ್ಮ ಮುಂದಿನ ನಡೆ ಹೇಗಿರಬೇಕು? ಸಂಬಂಧವನ್ನು ಹೇಗೆ ಉಳಿಸಿಕೊಂಡು ಹೋಗಬೇಕು? ನಿಮ್ಮನ್ನು ನೀವು ಹೇಗೆ ಸಂತೈಸಿಕೊಳ್ಳಬೇಕು? ನಿಮ್ಮ ಸಂಗಾತಿಯನ್ನು ಮತ್ತೆ ಹೇಗೆ ನಂಬಬೇಕು?

ಗಾಯ ಆರಲು ಬಿಡಿ. ಹೌದು ನಿಮಗೆ ಮೋಸವಾಗಿದೆ, ಆಳದಲ್ಲಿ ತುಂಬ ನೊಂದಿದ್ದೀರಿ, ಬದುಕಿನಲ್ಲಿ ಯಾವ ಆಸೆಗಳೂ ಉಳಿದಿಲ್ಲ ಎನಿಸುತ್ತದೆ. ವಿಚಿತ್ರವಾದ ಮೌನ, ಮುಜುಗರ ಇಬ್ಬರ ನಡುವೆ ಬಿದ್ದುಕೊಂಡಿದೆ. ಒಳಗೊಳಗೇ ಕುದಿಯುತ್ತಿದ್ದೀರಿ, ನೆನಪಾದಾಗೆಲ್ಲ ಮಾತುಗಳಿಂದ ಚುಚ್ಚುತ್ತೀರಿ, ಆತ/ಆಕೆ ಕುಗ್ಗಿ ಹೋಗುತ್ತಿದ್ದಾರೆ. ಎಷ್ಟು ದಿನ ಹೀಗೇ ಇರುತ್ತೀರಿ? ಒಂದು ವಾರ? ಹದಿನೈದು ದಿನ? ತಿಂಗಳು? ನೆನಪಿಟ್ಟುಕೊಳ್ಳಿ, ಸಂಗಾತಿಯೊಡನೆ ಮುನಿಸಿಕೊಂಡು ಇದ್ದಷ್ಟೂ ದಿನ ನಿಮ್ಮ ಮಾನಸಿಕ ನೆಮ್ಮದಿ ಮತ್ತಷ್ಟು ಮಗದಷ್ಟು ಹಾಳಾಗುತ್ತಲೇ ಹೋಗುತ್ತಿರುತ್ತದೆ.

ಹೀಗಾಗಿ ಮೆಲ್ಲಗಾದರೂ ಸರಿ, ನಡೆದಿದ್ದರ ಬಗ್ಗೆ ಸಮಾಧಾನವಾಗಿ ಮಾತಾಡುವ ಸ್ಥಿತಿಗೆ ಬನ್ನಿ. ಪರಸ್ಪರ ಅವಮಾನ ಮಾಡಿಕೊಳ್ಳದೆ ಮಾತಾಡಿಕೊಳ್ಳಿ. ನಿಮ್ಮ ಇಷ್ಟು ವರ್ಷಗಳ ಸಂಬಂಧ ನಡೆದುಬಂದ ರೀತಿಯ ಬಗ್ಗೆ ಹಂಚಿಕೊಳ್ಳಿ. ಮನಸ್ಸು ಭಾರವಾದರೆ ಅವರೆದುರೇ ಅತ್ತು ಬಿಡಿ. ಮೋಸ ಮಾಡಿದ ಸಂಗಾತಿಗೆ ನಿಜವಾಗಿಯೂ ನಿಮ್ಮಡನೆ ಇರಲು ಮನಸ್ಸಿದ್ದರೆ ಅವರು ನಿಮ್ಮಲ್ಲಿ ಮತ್ತೆ ಭದ್ರತೆಯ ಭಾವನೆ ಮೂಡಿಸಲು ಪ್ರಯತ್ನಿಸುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳಿ.

ಮೊದಲು ಯೋಚಿಸುವುದನ್ನು ನಿಲ್ಲಿಸಿ. ಇದು ಹೇಳಲು ಸುಲಭ. ಆದರೆ ಅಂಥ ಪರಿಸ್ಥಿತಿಯಲ್ಲಿ ಇದ್ದವರಿಗೇ ಗೊತ್ತು ಇದು ಎಷ್ಟು ಕಷ್ಟದ ಕೆಲಸ ಎಂಬುದು. ಆದರೆ ಮನಸ್ಸು ನೋವಿನ ಸಂಗತಿಯನ್ನು ಮತ್ತೆ ಮತ್ತೆ ನೆನಪಿಸುತ್ತದೆ. ತನಗೆ ಮೋಸವಾಗುತ್ತಿದ್ದ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಮರುಗುತ್ತದೆ, ಇಲ್ಲದ ಕಲ್ಪನೆಗಳನ್ನು ಮೂಡಿಸುತ್ತಲೇ ಇರುತ್ತದೆ. ನಡೆದದ್ದು, ನಡೆಯದೇ ಇರುವಂಥದ್ದು ಎಲ್ಲ  ಕಲ್ಪನೆಗಳಾಗಿ ನಿಮ್ಮನ್ನು ಇನ್ನಷ್ಟು ಕುಗ್ಗಿಸುತ್ತವೆ.

ಎಲ್ಲಿಯವರೆಗೆ ನೀವು ಇಂಥ ಯೋಚನೆಗಳಿಂದ ಹೊರ ಬರುವುದಿಲ್ಲವೋ ಅಲ್ಲಿಯವರೆಗೆ ನಿಮ್ಮಳಗಿನ ನೋವು, ತಳಮಳಗಳು ನಿಲ್ಲುವುದೇ ಇಲ್ಲ. ಯಾವುದೇ ಯೋಚನೆ, ಕೆಲಸವನ್ನು  ಸತತವಾಗಿ ಮಾಡುತ್ತಿದ್ದರೆ ಅದೇ ನಿಮ್ಮ ವ್ಯಕ್ತಿತ್ವವಾಗಿ ಬಿಡುತ್ತದೆ. ಒಳ್ಳೆಯ ಅಭ್ಯಾಸ, ಯೋಚನೆಗಳನ್ನು ಮಾಡುವುದು ಕಷ್ಟ. ಅದೇ ಇಂಥ ನಕಾರಾತ್ಮಕ ವಿಚಾರಗಳು ನಮ್ಮ ಹಿಡಿತಕ್ಕೂ ಮೀರಿ ಬಂದುಬಿಡುತ್ತವೆ. ಹೀಗಾಗಿ ನಿಮ್ಮ ಯೋಚನೆಗಳ ಮೇಲೆ ನಿಗಾ ಇಡಿ. ಹಟಕ್ಕೆ ಬಿದ್ದಾದರೂ ಸರಿ ಆ ನೆನಪುಗಳಿಂದ ಹೊರ ಬನ್ನಿ.

ಜವಾಬ್ದಾರಿ ಅರಿತುಕೊಳ್ಳಿ. ಇದು ಇಬ್ಬರಿಗೂ ಅನ್ವಯಿಸುವ ವಿಚಾರ. ಇಷ್ಟು ವರ್ಷ ಒಬ್ಬ ಸಂಗಾತಿಯೊಡನೆ ಇದ್ದು, ಈಗ ಒಮ್ಮೆಲೇ ಇನ್ಯಾರನ್ನೋ ಹತ್ತಿರವಾಗಿಸಿಕೊಳ್ಳುವ ಮುನ್ನ ನಿಮ್ಮ ಸಂಗಾತಿಗೆ ನಂಬಿಕೆಯ ನ್ಯಾಯ ಒದಗಿಸುವ ಜವಾಬ್ದಾರಿ ನಿಮಗೆ ಇದೆ ಎಂಬುದನ್ನು ಅರಿತುಕೊಳ್ಳಿ. ಯಾವುದೋ ಆಕರ್ಷಣೆಗೆ ಬಿದ್ದು ಇನ್ನೊಬ್ಬರೊಡನೆ ಹೋಗಿರುತ್ತೀರಿ. ಆದರೆ ನಿಮ್ಮನ್ನೇ ನಂಬಿದ ಇನ್ನೊಂದು ಜೀವಕ್ಕೆ ಅದರಿಂದ ಏನನಿಸಬಹುದು ಎಂದು ಒಂದು ಕ್ಷಣವಾದರೂ ಯೋಚಿಸಿ. ಇನ್ನು ಮೋಸ ಹೋದ ಸಂಗಾತಿಗೂ ಇಲ್ಲಿ ಜವಾಬ್ದಾರಿ ಇದೆ.

ತನ್ನ ಸಂಗಾತಿಯನ್ನು ನಂಬುವ, ಅವಮಾನ ಮಾಡದೇ ನಾನು ನಿನ್ನ ನಂಬುತ್ತೇನೆ ಎಂದು ತೋರಿಸಿಕೊಳ್ಳುವ ಹಾಗೂ ಆ ಮೂಲಕ ಸಂಬಂಧವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇದೆ. ಆದ ತಪ್ಪಿಗೆ ನಿಜವಾಗಿಯೂ ಪಶ್ಚಾತ್ತಾಪ ಪಡುವ ಸಂಗಾತಿ ನಿಮ್ಮಲ್ಲಿ ಮತ್ತೆ ಭರವಸೆಗಳನ್ನು ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಇನ್ನೊಂದು ಸಂಬಂಧದೊಂದಿಗೆ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಳ್ಳುತ್ತಾರೆ ಹಾಗೂ ಅದನ್ನು ನಿಮಗೆ ಪ್ರಮಾಣೀಕರಿಸುತ್ತಾರೆ. ಅವರ ಬದುಕನ್ನು ತೆರೆದ ಪುಸ್ತಕದಂತೆ ನಿಮ್ಮೆದುರು ಇಡುತ್ತಾರೆ. ಹೀಗೆಲ್ಲ ಇರುವಾಗ ನೀವು ಅವರನ್ನು ಅವಮಾನ ಮಾಡದೇ ನಂಬುವುದು ತುಂಬಾ ಮುಖ್ಯ.

ಹಳತು ತೇಲಿ ಹೋಗಲಿ
ಮತ್ತೆ ಮತ್ತೆ ಆಗಿದ್ದನ್ನೇ ವಿಚಾರ ಮಾಡುತ್ತಾ ಇದ್ದರೆ ಬದಲಾವಣೆ ಬರಲು ಸಾಧ್ಯವೇ? ನಾವು ಮೋಸ ಹೋದ ಸಂದರ್ಭದಲ್ಲಿ ಕೇಳಿದ ಹಾಡು, ಕೆಲವು ಫೋಟೊ, ಕೆಲವು ಸಾಲುಗಳು, ಎಸ್‌ಎಂಎಸ್, ಇ ಮೇಲ್, ಕೆಲವು ಕೊಟೇಶನ್‌ಗಳು ಇಂಥವೆಲ್ಲ ಪುನಃ ಪುನಃ ನೋವುಗಳನ್ನು ಕೆದಕಬಹುದು. ಇವನ್ನು `ಟ್ರಿಗರ್ ಪಾಯಿಂಟ್' ಎನ್ನುತ್ತಾರೆ. ನಿಜಕ್ಕೂ ಅವುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ. ತಪ್ಪಿಸಿಕೊಳ್ಳಲು ಒಂದೇ ಉಪಾಯ ಎಂದರೆ ಅವನ್ನು ನಮ್ಮ ನೋವಿನ ಸಂಗತಿಗಳೊಂದಿಗೆ ಹೋಲಿಸಿ ನೋಡುವುದನ್ನು ಬಿಟ್ಟುಬಿಡುವುದು.

ಇನ್ನೊಂದೆಂದರೆ  ನಿಮ್ಮ ನೋವಿನ ಬಗ್ಗೆ ಇನ್ನೊಬ್ಬರಲ್ಲಿ ಹಂಚಿಕೊಳ್ಳುವುದನ್ನೂ ನಿಲ್ಲಿಸಿ. ನೋವಿನ ಬಗ್ಗೆಯೇ ಮಾತಾಡುವುದರಿಂದ ಮನಸ್ಸು ಇನ್ನಷ್ಟು ಅದನ್ನೇ ನಂಬುತ್ತದೆ. ಸ್ವ ಮರುಕ ಹುಟ್ಟಿಕೊಳ್ಳುತ್ತದೆ. ಇದು ತುಂಬ ಅಪಾಯಕಾರಿ. ಬದುಕಿನಲ್ಲಿ ಈ ಹಿಂದೆ ಕೂಡ ಬೇರೆ ಬೇರೆ ಥರದ ನೋವನ್ನು ಹಾದು ಬಂದಿಲ್ಲವೇ? ಇದು ಕೂಡ ಹಾದು ಹೋಗುತ್ತದೆ. ಸಮುದ್ರದಲ್ಲಿ ಸುನಾಮಿ ಎದ್ದಾಗ ಮೇಲಿನ ಅಲೆಗಳು ಮಾತ್ರ ಪ್ರಕ್ಷುಬ್ಧವಾಗಿರುತ್ತವೆ. ಆಳದ ಅಲೆಗಳು ಎಂದಿನಂತೆ ಶಾಂತವಾಗೇ ಇರುತ್ತವೆ. ನಿಮ್ಮಲ್ಲೂ ಅಂಥದೇ ಚೈತನ್ಯವಿದೆ. ಏನೇ ಆದರೂ ದುಡುಕದೇ ಆ ದಿನಗಳನ್ನು ತಳ್ಳಿಬಿಡಿ. ಖಂಡಿತವಾಗಿಯೂ ನೆಮ್ಮದಿಯ ದಿನಗಳು ಮರಳುತ್ತವೆ.

ದ್ವೇಷ ಭಾವನೆ ಅಳಿಯಲಿ
ಇದು ಕೂಡ ಯೋಚನೆಯನ್ನು ನಿಲ್ಲಿಸುವಷ್ಟೇ ಕಷ್ಟದ ಸಂಗತಿ. ಸಂಗಾತಿ ಹಾಗೂ ಅವರಿಗೆ ಹತ್ತಿರವಾದವರ ಬಗ್ಗೆ ಕೊಂದು ಬಿಡುವಷ್ಟು ಕೋಪ ಇರುತ್ತದೆ. ಪರಸ್ಪರ ಮಾತಾಡಿ, ಬದುಕು ಒಂದು ಹಂತಕ್ಕೆ ಬಂದ ಮೇಲೂ ಆ ವ್ಯಕ್ತಿಯ ಬಗ್ಗೆ ದ್ವೇಷ ಭಾವನೆ ಹೋಗುವುದಿಲ್ಲ. ಶಾಂತವಾಗಿದ್ದ ಬದುಕಿನಲ್ಲಿ ಕಲ್ಲೆಸೆದವರು ಎಂಬ ಪೂರ್ವಗ್ರಹ ಹೋಗುವುದಿಲ್ಲ.

ಆದರೆ ಈ ಭಾವನೆಗಳು ನಮ್ಮನ್ನು ಸುಡುತ್ತವೆಯೇ ಹೊರತು ಅವರಿಗೆ ಯಾವ ವ್ಯತ್ಯಾಸವನ್ನೂ ಉಂಟು ಮಾಡುವುದಿಲ್ಲ. ಹೀಗಾಗಿ ನಿಮ್ಮನ್ನು ನೋಯಿಸಿದವರ ಬಗ್ಗೆ ನಿಮ್ಮ ಸಲುವಾಗಿಯಾದರೂ ಮೃದುವಾಗುವ ಅಗತ್ಯವಿದೆ. ಅವರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ. ಆಗ ಒಂದು ದಿನ ತಾನಾಗೇ ಅವರನ್ನು ಪೂರ್ವಗ್ರಹವಿಲ್ಲದೆ ನೋಡುವ ಮನಃಸ್ಥಿತಿ ಬೆಳೆಯುತ್ತದೆ.

ಕೊನೆಯಲ್ಲಿ ಎಲ್ಲಕ್ಕಿಂತ ಮುಖ್ಯವಾದ ಒಂದು ಸತ್ಯವನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಅಗತ್ಯವಿದೆ. ಅದೇನೆಂದರೆ ಬದುಕಿಗೆ ಯಾರೂ ಅನಿವಾರ್ಯವಲ್ಲ ಎಂಬುದು. ಸಂಬಂಧಗಳ ಮೇಲಿನ ಅತಿಯಾದ ಅವಲಂಬನೆ ನೋವು ನೀಡುತ್ತದೆ. ಗಂಡ- ಹೆಂಡತಿಯೇ ಇರಬಹುದು, ಇದ್ದಷ್ಟು ದಿನ ಸತ್ಯ. ಬಿಟ್ಟು ಹೋದರೆ  ಅಥವಾ ಸತ್ತು ಹೋದರೆ ಅಲ್ಲಿಗೆ ಮುಗಿಯಿತು.

ಅಷ್ಟೇ ಅಲ್ಲದೆ ಸಂಬಂಧಗಳ ಬಗ್ಗೆ ಬದ್ಧತೆ ತೋರುವುದು ಆಯಾಯ ವ್ಯಕ್ತಿಗೆ ಬಿಟ್ಟ ವಿಚಾರ. ಅದನ್ನು ಒತ್ತಡ ಹೇರುವ ಮೂಲಕ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಒಂದು ಮಟ್ಟದ ನಿರ್ಲಿಪ್ತ ಭಾವನೆಯೊಂದಿಗೆ ಇಂಥ ಸಂದರ್ಭಗಳನ್ನು ವಾಸ್ತವದ ನೆಲೆಯಲ್ಲಿ, ತಾರ್ಕಿಕವಾಗಿ ನೋಡತೊಡಗಿದರೆ ಬೇಗನೇ ನೋವಿನಿಂದ ಹೊರಬರಬಹುದು.

ಬಿಡುವುದು ಸುಲಭವಲ್ಲ
ಒಂದನ್ನು ಅರಿತುಕೊಳ್ಳಿ, ನಿಮ್ಮ ಸಂಗಾತಿಗೆ ನೀವು ಬೇಡವಾಗಿದ್ದರೆ ಅವರು ತಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳುವುದಿಲ್ಲ. ಇನ್ನೊಂದು ಸಂಬಂಧವನ್ನು ದೂರ ಇಡುವ ತೀರ್ಮಾನವನ್ನೂ ಮಾಡುತ್ತಿರಲಿಲ್ಲ. ಎಲ್ಲ ತಪ್ಪನ್ನೂ ಒಪ್ಪಿಕೊಂಡು ಪಶ್ಚಾತ್ತಾಪದಿಂದ ನಿಮ್ಮ ಬಳಿ ಬಂದಿರುವವರನ್ನು ಕ್ಷಮಿಸಿ.

ಅಷ್ಟು ವರ್ಷಗಳ ಕಾಲ ಒಟ್ಟಿಗೆ ಒಂದೇ ಮನೆಯಲ್ಲಿ ಬದುಕಿರುತ್ತೀರಿ, ಜೊತೆಗೆ ಕುಳಿತು ಊಟ ಮಾಡಿರುತ್ತೀರಿ, ಸಿನಿಮಾ ನೋಡಿರುತ್ತೀರಿ, ಪ್ರವಾಸ ಹೋಗಿರುತ್ತೀರಿ, ಕನಸು ಹಂಚಿಕೊಂಡಿರುತ್ತೀರಿ. ಹೀಗಿರುವಾಗ ಯಾವುದೋ ಮೂರನೆಯ ವ್ಯಕ್ತಿಗಾಗಿ ಅವರನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಲ್ಲ. ಪರಸ್ಪರ ನಂಬಿಕೆ ಬೆಳೆಯಲು ವರ್ಷಗಳೇ ಹಿಡಿಯಬಹುದು. ಅಲ್ಲಿಯವರೆಗೆ ಇಬ್ಬರೂ ನಡೆದ ಸಂಗತಿಯನ್ನು ನೆನಪಿಸಿಕೊಳ್ಳದೇ, ಅವಮಾನಿಸಿಕೊಳ್ಳದೇ, ಅನುಮಾನಿಸದೇ ಈ ಸಂಬಂಧ ಉಳಿಸಿಕೊಳ್ಳುವುದು ತಮ್ಮಿಬ್ಬರ ಜವಾಬ್ದಾರಿ ಎಂದುಕೊಂಡು ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT