ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮನದ ‘ಶರಸೇತುಬಂಧ’

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ಅನಗತ್ಯ ಮಾತಿನ ಚಪಲ, ಪ್ರತಿಷ್ಠೆ ಮನುಷ್ಯನ ಬದುಕನ್ನು ಸಂಕಷ್ಟಕ್ಕೆ ಕೊಂಡು ಹೋಗುತ್ತದೆ. ಕೆಲಸವಿಲ್ಲದ ಮನುಷ್ಯ ಇನ್ನೊಬ್ಬರ ಸಾಮರ್ಥ್ಯವನ್ನು ಕೀಳಾಗಿ ಕಂಡರೆ ಅದು ಅವನ ಅವನತಿಯೇ ಹೌದು ಎಂಬುದನ್ನು ನಿರೂಪಿಸುವ ಒಳ್ಳೆಯ ಪೌರಾಣಿಕ ಯಕ್ಷಪ್ರಸಂಗವನ್ನು ಇತ್ತೀಚೆಗೆ ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆ ಪ್ರದರ್ಶಿಸಿತು.

ಪ್ರತೀ ತಿಂಗಳೂ ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾಸದ ಮೆಲುಕು‘ ಸರಣಿಯ ೩೩ನೇ ಸಾಂಸ್ಕೃತಿಕ ಕಾರ್ಯಕ್ರಮದ ಭಾಗ ಅದು.

ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ, ಕೆ.ಎಸ್.ಆರ್.ಟಿ.ಸಿ. ಬಡಾವಣೆಯಲ್ಲಿ ನಡೆದ ಮಹಾಭಾರತದಲ್ಲಿನ ಒಂದು ಭಾಗವಾದ ‘ಶರಸೇತು ಬಂಧ’ ಯಕ್ಷಗಾನ ಪ್ರಸಂಗ ಸೇತುಮಾಧವರಾವ್ ಪ್ರಕಾಶಿಸಿದ ಸುಭದ್ರಾ ಕಲ್ಯಾಣದಲ್ಲಿನ ಒಂದು ಭಾಗವಾಗಿದೆ. ನಗರದಲ್ಲಿದ್ದು ಯಕ್ಷಗಾನವನ್ನು ಹವ್ಯಾಸವಾಗಿಸಿಕೊಂಡ ಕಲಾವಿದರಾದ ಅಂಬರೀಷ್ ಭಟ್ ಅರ್ಜುನನಾಗಿ, ವಿನಯ್ ಭಟ್ ಹನುಮಂತನಾಗಿ ಅಭಿನಯಿಸಿದರು. ಅರ್ಜುನ ಮತ್ತು ಹನುಮಂತನ ಪಾತ್ರಗಳನ್ನು ಅತ್ಯಂತ ಸ್ವಾರಸ್ಯಪೂರ್ಣವಾಗಿ ಪ್ರೇಕ್ಷಕರನ್ನು ರಂಜಿಸುವಂತೆ ಪೋಷಿಸಿದರು. ಅಂದಿನ ಪಾತ್ರಗಳು ಮುಖಾಮುಖಿಯಾದ ಸಂದರ್ಭ, ಸನ್ನಿವೇಶಗಳು ಇಂದಿಗೂ ಹೇಗೆ ಪ್ರಸ್ತುತ ಎಂಬಂತೆ ಬಿಂಬಿಸಿದ್ದು ಪ್ರಸಂಗದ ವಿಶೇಷ. ರಾಧಾಕೃಷ್ಣ ಉರಾಳ ಬ್ರಾಹ್ಮಣ ವೇಷದಲ್ಲಿ, ಸುರೇಶ್ ತಂತ್ರಾಡಿ ರಾಮನಾಗಿ ಪ್ರಸಂಗದ ಅಂತ್ಯವನ್ನು, ಕಥೆಯ ಧ್ಯೇಯೋದ್ದೇಶವನ್ನು ಸಮರ್ಥವಾಗಿ ಮೂಡಿಸಿದರು.

ಹಿಮ್ಮೇಳದಿಂದಲೇ ಹೆಚ್ಚು ಬೆರಗು ಪಡೆವ ಯಕ್ಷಗಾನದ ಪ್ರಸಂಗದಲ್ಲಿ ಕಿರಣ್ ಹಾಡುಗಾರಿಕೆ, ನರಸಿಂಹ ಆಚಾರ್, ಕಾರ್ತಿಕ್ ಧಾರೇಶ್ವರ್ ತಮ್ಮ ಪ್ರಾಮಾಣಿಕ ಪ್ರಯತ್ನದ ಮೂಲಕ ಜನರನ್ನು ಸೆಳೆಯುವಲ್ಲಿ ಯಶ ಸಾಧಿಸಿದರು.

ಯಕ್ಷಗಾನದ ಸಂಪ್ರದಾಯದಲ್ಲಿ ಹೊಸ ಅಡವಳಿಕೆಯಾಗಿ ಕಲಾಕದಂಬ ಮಾಡುತ್ತಿರುವ ಜಮ್ಮಟಿಕೆ ಪ್ರಯೋಗವು ಜಮ್ಮಟಿಗೆ ನಾಗರಾಜ ಅವರ ಯಕ್ಷಗಾನ ಆಸಕ್ತಿ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿಶೇಷ ಮೆರುಗು ನೀಡಿರುವುದಂತೂ ಸತ್ಯ.

ಕಾರ್ಯಕ್ರಮದ ಆರಂಭದಲ್ಲಿ ಮುರಳೀಧರ ನಾವಡ ಅವರ ಸಂಗೀತ ನಿರ್ದೇಶನದಲ್ಲಿ ಬಾಲ ಕಲಾವಿದರು ಹಾಡಿದ ಹಾಡುಗಳು ಸಂಸ್ಥೆಯ ಹಲವು ಮಜಲಗಳ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸಿದವು. ವಿಶ್ವನಾಥ ಉರಾಳ ಕಾರ್ಯಕ್ರಮ ಸಂಯೋಜಿಸಿದ್ದು, ದೇವರಾಜ್ ಕರಬ, ಸತ್ಯನಾರಾಯಣ್, ನಿತ್ಯಾನಂದ ನಾಯಕ್ ಮೊದಲಾದವರ ಸಹಕಾರದೊಂದಿಗೆ ಕಾರ್ಯಕ್ರಮ ರಂಜನೀಯವಾಗಿ ಮೂಡಿಬಂತು.

ಈ ಪ್ರದರ್ಶನಕ್ಕೆ ಕನ್ನಡ ರಂಗಭೂಮಿಯ ಬೆಳಕಿನ ತಂತ್ರಜ್ಞ ಯುವ ಪ್ರತಿಭೆಯಾದ ಅರುಣ್ ಮೂರ್ತಿ, ಮನೋರಂಜಿನಿ ಸಾಂಸ್ಕೃತಿಕ ವೇದಿಕೆಯ ಸತ್ಯನಾರಾಯಣ್, ಸಿದ್ಧಿ ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಸದುದ್ದೇಶಕ್ಕೆ ಶುಭಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT