ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹಕ ನೃತ್ಯ ಚಂದ್ರಿಕೆ

ನಾದನೃತ್ಯ
Last Updated 22 ಆಗಸ್ಟ್ 2016, 6:04 IST
ಅಕ್ಷರ ಗಾತ್ರ

ಹೇಳಿ ಮಾಡಿಸಿದ ಭಾಮಾ ವಿಲಾಸದ ವೈಯ್ಯಾರದ ನಡೆಯಿಂದ, ಹಸನ್ಮುಖದ ನರ್ತನದಿಂದ ನೆರೆದ ಕಲಾಸಕ್ತರನ್ನು ಮೋಡಿ  ಮಾಡಿದರು  ಕೂಚಿಪುಡಿ ನೃತ್ಯ ಕಲಾವಿದೆ ನಂದ್ಯಾಲ ಚಂದ್ರಿಕಾ.

ಇತ್ತೀಚೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ  ವಿಧ್ಯುಕ್ತವಾಗಿ ರಂಗಪ್ರವೇಶ ಮಾಡಿದ ಈ ಕಲಾವಿದೆ ವೈವಿಧ್ಯಪೂರ್ಣ ಕೃತಿಗಳಿಂದ ರಂಜಿಸಿದರು.

ಯತಿ ನಾರಾಯಣತೀರ್ಥರು ನಟರಾಗ, ಆದಿತಾಳದಲ್ಲಿ ರಚಿಸಿದ ಹರಿದ್ರಾ ಗಣಪತಿಯ ಸ್ತುತಿಯನ್ನು ಸಕಲ ಸಿದ್ಧಿ- ಯಶಸ್ಸುಗಳಿಗೆ ಪ್ರಾರ್ಥಿಸುತ್ತ, ಗಣಪನ ಸುಂದರ ವರ್ಣನೆಗಳಿಗೆ ತನ್ನ ಸುಂದರ ಅಭಿನಯದಿಂದ ಪ್ರತಿಮಾ ರೂಪವನ್ನು ಕಡೆದಿರಿಸಿದರು ಚಂದ್ರಿಕಾ.

ರಾಗಮಾಲಿಕೆಯ ‘ಜಯ ಜಯ ಸ್ವಾಮಿ ಜಯ ಜಯ’ ಎಂಬ ಭುಜಂಗರಾಯ ಶರ್ಮ  ವಿರಚಿತ ‘ಪೂರ್ವರಂಗ’ದಲ್ಲಿ ಶಿವ-ಪಾರ್ವತಿಯರನ್ನು ವಂದಿಸಿ, ಸಕಲರಿಗೂ ಶುಭವಾಗಲೆಂದು ಹಾರೈಸುವ ಈ ಮಧುರ ಪ್ರಬಂಧದಲ್ಲಿ ರಸಾನುಭವ ಸಾಕ್ಷಾತ್ಕಾರವಾಯಿತು. ಶಿವಸ್ತುತಿಯು (ರಾಗ- ಸಿಂಹೇಂದ್ರ ಮಧ್ಯಮ) ‘ಕುಲವೈನಾಡೆ ದೇವ ದೇವುಡು’ ಎಂಬ  ಶಿವಧ್ಯಾನ ಶ್ಲೋಕದಿಂದ ಆರಂಭವಾಗಿ ಭಕ್ತಿಯ ಪಾರಮ್ಯದಲ್ಲಿ ಕಲಾವಿದೆ ತನ್ಮಯತೆಯಿಂದ ನರ್ತಿಸಿದರು.

ಮೋಹನರಾಗ ಆದಿತಾಳದಲ್ಲಿ ‘ಕೃಷ್ಣ ಶಬ್ದ’ವನ್ನು ಲಾಸ್ಯ ಭಾವ-ಭಂಗಿಗಳಿಂದ ಆಕರ್ಷಣೆ ಮೂಡಿಸಿದ ಕಲಾವಿದೆ ಕೃಷ್ಣನಲ್ಲಿ ತನಗಿದ್ದ ಗಾಢ ಅನುರಾಗವನ್ನು ಅವನ ರೂಪ-ಶೌರ್ಯಗಳನ್ನು ವಿಧವಿಧವಾಗಿ ಬಣ್ಣಿಸುತ್ತಾ, ಹುಬ್ಬಿನ ಬಳುಕಾಟ, ಒನಪು-ವಯ್ಯಾರದ ನಡೆ, ಮೋಹಕ ಬಾಗು-ಬಳುಕುಗಳಿಂದ ಶೃಂಗಾರರಸವನ್ನು ಚಿಮ್ಮಿಸಿದರು. ಭಗವಂತನಲ್ಲಿ ತನ್ನ ಆತ್ಮ ನಿವೇದನೆಯ ಕಾತರತೆಯನ್ನು ಅಭಿವ್ಯಕ್ತಿಸುವ ನಾಟ್ಯದಲ್ಲಿ ದೈವಿಕ ಪ್ರೇಮ ಪ್ರೇಕ್ಷಕ ಗಣದ ಅನುಭವಕ್ಕೆ ಬಂದಿತು.

ಇವರ ನೃತ್ಯದ ಇನ್ನೊಂದು ವಿಶೇಷ ಅಂಶವೆಂದರೆ, ಪ್ರತಿಯೊಂದು ಕೃತಿಯನ್ನೂ ಸಾಕಾರಗೊಳಿಸಿದ ನಂತರ ನಿಷ್ಕ್ರಮಣ ಮತ್ತು ಆಗಮನಕ್ಕೆ ರಂಗಾಕ್ರಮಣ ತಂತ್ರ ಬಳಕೆಯಾಗುತ್ತಿತ್ತು. ಇದು ಗಮನಾರ್ಹ ಸುಂದರ ಅಂಶವಾಗಿತ್ತು. ನೃತ್ಯದ ಆಕೃತಿಗೊಂದು ಕಲಾಪೂರ್ಣ ಆಯಾಮ ನೀಡಿತೆಂದರೆ ಅತಿಶಯೋಕ್ತಿಯಲ್ಲ.

‘ರುಕ್ಮಿಣಿ ಪ್ರವೇಶಂ’ (ರಾಗಮಾಲಿಕೆ, ತಾಳಮಾಲಿಕೆಯ ಸಂಯೋಜನೆ) ಕೃತಿಯು ಹರಿವಂಶ ಪುರಾಣದಲ್ಲಿ ಬರುವ ಶ್ರೀಕೃಷ್ಣ ಪಾರಿಜಾತದಿಂದ ಆಯ್ದ ಭಾಗಗಳನ್ನು ಸಾದರಪಡಿಸಿತು.

ಸತ್ಯಭಾಮೆ ಮತ್ತು ರುಕ್ಮಿಣಿಯರ ನಡುವೆ ನಾರದರು ಜಗಳ ತಂದಿಟ್ಟ ಪ್ರಸಂಗ. ‘ನಾದ ಚಂಚಲ ಲೋಲ’ ಎಂದು ಮನಸಾರೆ ತನ್ನ ಪ್ರೀತಿ ಸಮರ್ಪಣೆ ಮಾಡಿಕೊಳ್ಳುವ ರುಕ್ಮಿಣಿ, ತನ್ನ ಕುಲಗೋತ್ರಗಳ ಬಗ್ಗೆ ಹೇಳಿಕೊಳ್ಳುತ್ತಾ ಕೃಷ್ಣನಲ್ಲಿ ಪ್ರೀತಿ ಮತ್ತು ಭಕ್ತಿಯನ್ನು ನಿವೇದಿಸಿಕೊಳ್ಳುವ ಭಾವವನ್ನು ಕಲಾವಿದೆ ತನ್ನ ಚಂಚಲ ಮಿನುಗು ಕಣ್ಣೋಟದಿಂದ, ಆಕರ್ಷಕ ಜತಿಗಳಿಂದ, ನೃತ್ಯದ ಬೆಡಗಿನಿಂದ ಅಭಿವ್ಯಕ್ತಿಸಿದರು.

ಭಾವಾಶ್ರಯವಾದ ನೃತ್ಯ ಹಾಗೂ ತಾಳ– ಲಯಾಶ್ರಯವಾದ ನೃತ್ತಗಳ ಸಮ್ಮಿಳತವೇ ವಿಶಿಷ್ಟವಾದ ‘ತರಂಗ’. ಶೃಂಗಾರ ಮತ್ತು ಭಕ್ತಿಪ್ರಧಾನವಾದ ಮಧ್ಯಮ ಕಾಲದ ನಡೆಗಳಿಂದಲೂ ಸುಮಧುರ ಸಂಗೀತದಿಂದಲೂ, ಸಂಸ್ಕೃತ ಸಾಹಿತ್ಯ ಇದರ ವೈಶಿಷ್ಟ್ಯ.

ತಲೆಯ ಮೇಲೆ ನೀರು ತುಂಬಿದ ಕುಂಭ ಇರಿಸಿಕೊಂಡು, ಪಾದದ ಕೆಳಗೆ ಹಿತ್ತಾಳೆ ತಟ್ಟೆಯನ್ನಿಟ್ಟುಕೊಂಡು, ತಲೆಯ ಮೇಲಿನ ತಂಬಿಗೆಯಿಂದ ನೀರು ತುಳುಕದಂತೆ, ತಟ್ಟೆಯ ಮೇಲಿನ ಪಾದಗಳನ್ನು ತೆಗೆಯದೆ, ತಾಳ ಲಯ ಬದ್ಧವಾಗಿ, ಸಂಗೀತ-ಸಾಹಿತ್ಯಕ್ಕೆ ತಕ್ಕಂತೆ ನರ್ತಿಸುವ ಈ ವಿಧಾನಕ್ಕೆ ‘ನಾಟ್ಯ ಯೋಗ’ವೆಂದು ಹೆಸರು.

ಇದು ಕೂಚಿಪುಡಿ ನಾಟ್ಯದ ವಿಶೇಷ ಕಲಾ ಸಂಪತ್ತು  ಕೂಡ. ಕಸರತ್ತಿನ  ಈ ನೃತ್ಯದಲ್ಲಿ ಕಲಾವಿದೆ ತನ್ನ ಎಂದಿನ ಬಾಗು-ಬಳುಕುಗಳನ್ನು ಮೋಹಕವಾಗಿ ತೋರಿದರು. ತನ್ನ ಸ್ಥಿತಪ್ರಜ್ಞತೆಯನ್ನು, ಮನೋದೃಢತೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿ ಕಲಾರಸಿಕರ ಮೆಚ್ಚುಗೆ ಪಡೆದರು.

ಇದರ ನಂತರದ ಜತಿಗಳು, ವೇಗದ ಪದಚಲನೆಗಳು  ಗಮನ ಸೆಳೆದವು. ದುಷ್ಟ ಪೂತನಿಯ ಸಂಹಾರದ   ಅಭಿನಯ ಮನೋಜ್ಞವಾಗಿತ್ತು. ಪೂತನಿ ಹೆಣ್ಣಾಗಿ ಪರಿವರ್ತಿತಳಾದ ನಂತರ, ಅವಳ ಅಲಂಕಾರ, ಗಂಡು ನಡಿಗೆ-ವರ್ತನೆಗಳನ್ನು ಕಲಾವಿದೆ ಸೊಗಸಾಗಿ ಅಭಿನಯಿಸಿದರು. ಇದರಲ್ಲಿನ ನಾಟಕೀಯ ಅಂಶಗಳು ಮನಮುಟ್ಟಿದವು. ಈ ಪ್ರಸಂಗದಲ್ಲಿ ಕಂಡ ಹುಸಿ ಅಡವುಗಳು, ಮಂಡಿ ಅಡವು-ಭ್ರಮರಿಗಳು ನೋಡಲು ಮುದ ನೀಡಿದವು.

ಮುಂದೆ ಕ್ಲಿಷ್ಟ ಪದಚಲನೆಯ ‘ತಿಲ್ಲಾನ’ ಪ್ರಮುಖ ನೃತ್ತಪ್ರಧಾನ ಬಂಧವಾಗಿ ಮನ ಸೆಳೆಯಿತು. ಚಂದ್ರಿಕಾಳ ಈ ಸುಂದರ ನೃತ್ಯಗಳನ್ನು ವಿಶಿಷ್ಟವಾಗಿ ಸಂಯೋಜಿಸಿದವರು ನೃತ್ಯಗುರು ಧರಣಿ ಕಶ್ಯಪ್ ನಟುವಾಂಗವನ್ನೂ ಸಮರ್ಥವಾಗಿ ನಿಭಾಯಿಸಿದರು. ಸಂಗೀತಾ– ರಮಾ ಜಗನ್ನಾಥ್, ಮೃದಂಗ-ಪುರುಷೋತ್ತಮ್, ಕೊಳಲು- ಭಾಸ್ಕರ್ ಮತ್ತು ಪಿಟೀಲು- ಗಣೇಶ್ ಕುಮಾರ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT