ಜಾವಗಲ್: ಸೋಮನ ಕುಣಿತ, ವೀರಗಾಸೆ, ನೃತ್ಯ, ಕೋಲಾಟ, ಅಭಿನಯ ಗೀತೆ, ರಂಗು ರಂಗಿನ ವೇಷ ಭೂಷಣ, ಛದ್ಮವೇಷ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆ ಗಳು ಪ್ರತಿಭಾ ಕಾರಂಜಿಯಲ್ಲಿ ಅನಾವರಣಗೊಂಡವು. ವಿದ್ಯಾರ್ಥಿಗಳು ತೀರ್ಪುಗಾರರಿಗೆ ಸವಾಲು ನೀಡಿ ತಮ್ಮ ಪ್ರತಿಭೆ ಪ್ರದರ್ಶಿಸಿ ಪೋಷಕರು ಹಾಗೂ ಶಿಕ್ಷಕರಿಗೆ ಮನರಂಜನೆ ನೀಡಿದರು.
ಇತ್ತೀಚೆಗೆ ಜಾವಗಲ್ನಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಬಾಚೆನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಹೆಗ್ಗಟ್ಟ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಕೋಲಾಟದ ಮೂಲಕ ಜಡೆ ಹೆಣೆಯುವ ನೃತ್ಯ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾದರು.
6 ನೇ ತರಗತಿ ವಿದ್ಯಾರ್ಥಿ ಪವನ್ ಮಣ್ಣಿನ ಕೈಚಳಕದಿಂದ ಗಣಪತಿ ನಿರ್ಮಿಸಿದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ನವಿಲು, ಮೊಸಳೆ, ದಸರಾ ಅಂಬಾರಿ, ನಾಲ್ಕು ತಲೆ ಸಿಂಹಗಳನ್ನು ಮಣ್ಣಿನಿಂದ ತಯಾರಿಸಿ ಗಮನಸೆಳೆದರು.
ಛದ್ಮವೇಷ ಸ್ಪರ್ಧೆಯಲ್ಲಿ ಪುರಾಣ ಪುಣ್ಯಕಥೆ ಜಾನಪದ ಬಿಂಬಿಸುವ ದೇಸಿಕಲೆಯನ್ನು ಹೆಚ್ಚಿನ ರೀತಿಯಲ್ಲಿ ಪ್ರದರ್ಶಿಸಿದರು.
ಪುಟ್ಟಮಕ್ಕಳು ಇಂಪಾದ ಕಂಠದೊಂದಿಗೆ ಗಾನಸುಧೆ ಹರಿಸುತ್ತಿದ್ದರು.
ಶಿಕ್ಷಕರು ಮಕ್ಕಳಿಗೆ ಬೆನ್ನೆಲುಬಾಗಿ ನಿಂತು ಕಲಾ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿದ್ದರು.