ಚಿಕ್ಕಬಳ್ಳಾಪುರ: ಸಾಕ್ಷರತೆ ಮಹತ್ವವನ್ನು ಎಲ್ಲರೂ ಅರಿತು ಅಕ್ಷರ ಕಲಿಯುವ ಉತ್ಸಾಹ ತೋರಿದರೆ ಮಾತ್ರ ಸಾಕ್ಷರತೆ ಗುರಿಯು ಪೂರ್ಣ ಪ್ರಮಾಣದಲ್ಲಿ ಈಡೇರಿದಂತಾಗುತ್ತದೆ. ಪ್ರಜ್ಞಾವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಅಭಿಪ್ರಾಯಪಟ್ಟರು.
ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ನಗರದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಅಕ್ಷರನಂದಿ ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿನ ಮಕ್ಕಳ ಜೊತೆಗೆ ಹಿರಿಯರು ಸಹ ಅಕ್ಷರಗಳನ್ನು ಕಲಿಯಲು ಆಸಕ್ತಿ ತೋರಬೇಕು ಎಂದರು.
ಬಡತನ, ಕೌಟಂಬಿಕ ಸಮಸ್ಯೆ ಮತ್ತು ಇನ್ನಿತರ ಕಾರಣಗಳಿಂದ ಅಕ್ಷರ ಕಲಿಯಲು ಸಾಧ್ಯವಾಗಲಿಲ್ಲ ಎಂದು ಬೇಸರಪಡುವ ಬದಲು ಹಿರಿಯರು ಈಗಲೂ ಸಹ ಸಾಕ್ಷರತಾ ಅಭಿಯಾನದಲ್ಲಿ ಪಾಲ್ಗೊಂಡು ಅಕ್ಷರಗಳನ್ನು ಕಲಿಯಬಹುದು. ಸಾಕ್ಷರರಾಗಲು ಬಯಸಿದಲ್ಲಿ, ಸರ್ಕಾರ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ. ಶಿಕ್ಷಣದಿಂದಾಗಿ ಹೊಸ ವಿಚಾರಗಳನ್ನು ಕಲಿಯಬಹುದು ಮತ್ತು ಉತ್ತಮ ಸಮಾಜ ನಿಮಿರ್ಸಬಹುದು ಎಂಬುದು ಪ್ರತಿಯೊಬ್ಬರು ಮನಗಾಣಬೇಕು ಎಂದು ಅವರು ಹೇಳಿದರು.
ಸಾಕ್ಷರತೆ ಕುರಿತು ವಿಶೇಷ ಉಪನ್ಯಾಸ ನೀಡಿದ ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ, ದೇಶದಲ್ಲಿ ಸಾಕ್ಷರತಾ ಆಂದೋ-ಲನ ತನ್ನದೇ ಮಹತ್ವ ಹೊಂದಿದೆ. ಆಂದೋಲನಕ್ಕೆ 20ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಸಾಕ್ಷರರಾಗಿದ್ದಾರೆ. 1992ರಲ್ಲಿ ಆರಂಭಗೊಂಡ ‘ಅಕ್ಷರತೆನೆ’ ಎಂಬ ವಿನೂತನ ಕಾರ್ಯಕ್ರಮ ಸಂಚಲನವನ್ನೇ ಉಂಟು ಮಾಡಿತ್ತು. ಅಕ್ಷರತೆನೆಯ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಅಕ್ಷರ ಅಭಿಯಾನ ಕೈಗೊಂಡಿದ್ದರು ಎಂದು ವಿವರಿಸಿದರು.
ದೇಶದಲ್ಲಿ ಈಗಲೂ ಶೇ 70ರಷ್ಟು ತಾಯಂದಿರು ಅನಕ್ಷರಸ್ಥರಾಗಿದ್ದಾರೆ. ಬೇರೆ ಬೇರೆ ಮಾರ್ಗೋಪಾಯಗಳನ್ನು ಕಂಡುಕೊಂಡಾದರೂ ತಾಯಂದಿರಿಗೆ ಅಕ್ಷರ ಕಲಿಸಬೇಕು. ಅವರು ಕಲಿತರೆ ಶಾಲೆಯೊಂದು ತೆರೆದಂತೆ. ಮನಸ್ಸಿಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಖಂಡಿತವಾಗಿಯೂ ಫಲ ನೀಡುತ್ತದೆ. ನಾವು ಕಲಿತು, ಇನ್ನೊಬ್ಬರಿಗೆ ಅಕ್ಷರಜ್ಞಾನದ ಬೀಜ ಬಿತ್ತಬೇಕು. ಜಿಲ್ಲೆಯಲ್ಲಿ 3 ಲಕ್ಷ ಅನಕ್ಷರಸ್ಥರಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್ ಮಾತನಾಡಿ, ದೇಶದಲ್ಲಿ ವಿದ್ಯಾವಂತರ ಪ್ರಮಾಣ ಹೆಚ್ಚಿಸಲೆಂದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಹೀಗಿದ್ದರೂ ಕೆಲ ಮಕ್ಕಳು ಶಾಲೆಯಿಂದ ದೂರವುಳಿಯುತ್ತಿರುವುದು ಶೋಚನೀಯ. ಶಿಕ್ಷಣ ಅಭಿವೃದ್ಧಿಯ ಸಂಕೇತ ಎಂಬುದನ್ನು ತಿಳಿಸಿಯಾದರೂ ಸಾಕ್ಷರರ ಸಂಖ್ಯೆ ಹೆಚ್ಚಳಗೊಳಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ದಸ್ತಗಿರ್ಸಾಬ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.