ಶಿವಮೊಗ್ಗ: ದೈಹಿಕವಾಗಿ ಸುಂದರವಾಗಿದ್ದರಷ್ಟೇ ಆರೋಗ್ಯವಂತರಲ್ಲ; ಮನಸ್ಸು, ಆತ್ಮ ಮತ್ತು ಇಂದ್ರಿಯ ಎಲ್ಲವೂ ಸ್ವಸ್ಥವಾಗಿದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಎಂದು ಸ್ಥಳೀಯ ಆಯುರ್ವೇದ ಕಾಲೇಜಿನ ವಿಶೇಷ ಕರ್ತವ್ಯ ಅಧಿಕಾರಿ ಡಾ.ಸಿ.ಎ. ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಕ್ಷೇಮ ಟ್ರಸ್ಟ್ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಮತ್ತು ಸಂಶೋಧನಾ ವಿಭಾಗ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ `ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರ ಬಳಿ ಹೋಗದಿದ್ದರೆ ಮಾತ್ರ ಆರೋಗ್ಯವಂತರು ಎಂಬ ಕಲ್ಪನೆ ಇದೆ. ಆದರೆ, ದಿನ ನಿತ್ಯ ಪ್ರತಿ ಹಂತದಲ್ಲೂ ಮನಸ್ಸಿನ ವಿಕೃತಿ ತೋರಿಸುವುದು ಅನಾರೋಗ್ಯದ ಲಕ್ಷಣ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ `ಮಕ್ಕಳು ಮತ್ತು ಹರೆಯದವರು ಏಕೆ ಖಿನ್ನತೆಗೆ ಬಲಿಯಾಗುತ್ತಿದ್ದಾರೆ?~ ಎಂಬ ವಿಷಯ ಕುರಿತು ಉಪನ್ಯಾಸಕಿ ಸಂಧ್ಯಾ ಕಾವೇರಿ ಉಪನ್ಯಾಸ ನೀಡಿದರು. ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ.ರವೀಂದ್ರ ಡಿ. ಗಡ್ಕರ್ ಉಪಸ್ಥಿತರಿದ್ದರು. ಎಂ.ಡಿ. ರವಿ ಸ್ವಾಗತಿಸಿದರು.