ಕುಂದಾಪುರ: ಕ್ರೀಡೆ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದುದು. ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನಡೆಯುವ ಕ್ರೀಡಾಕೂಟದಲ್ಲಿ ಭಾಗಿಯಾದ ಪ್ರತಿಯೊಬ್ಬ ಸ್ಪರ್ಧಿಯಲ್ಲಿಯೂ ಸ್ಪರ್ಧಿಸುವ ಮನೋಭಾವ ಇರಬೇಕು. ಸ್ಪರ್ಧೆಗಳೆಂದರೆ ಗೆಲ್ಲಲು ಮಾತ್ರ ಎನ್ನುವ ಮನೋಭಾವ ಇರಕೂಡದು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಮುಖ್ಯ ಎಂದು ಮೊಗವೀರ ಸಮಾಜದ ಮುಖಂಡ, ಉಡುಪಿ ಜಿ.ಶ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ ಶಂಕರ್ ತಿಳಿಸಿದರು.
ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ಕೋಟೇಶ್ವರ ವಲಯ ಸಂಘಟನೆ ಸಹಭಾಗಿತ್ವದಲ್ಲಿ ಭಾನುವಾರ ಬೆಳಿಗ್ಗೆ ಕೋಟೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ‘ಮೊಗವೀರ ಯುವ ಕ್ರೀಡಾಕೂಟ-2011’ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಸತೀಶ್ ಎಂ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಆನಂದ ಸಿ. ಕುಂದರ್ ಕೋಟ, ಸುರೇಶ್ ಆರ್. ಕಾಂಚನ್ ಮುಂಬೈ, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಅಧ್ಯಕ್ಷ ಗೋಪಾಲ್ ಎಸ್. ಪುತ್ರನ್, ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಕೇಶವ್ ಕುಂದರ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಬಿ.ಹಿರಿಯಣ್ಣ, ಕ್ರೀಡಾ ತರಬೇತುದಾರ ದಿನೇಶ್ ಕುಂದರ್ ಮಂಗಳೂರು, ಮೊಗವೀರ ಯುವ ಸಂಘಟನೆ ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲಕ್ಷ್ಮಿನಾರಾಯಣ ತುಂಗ, ಉಪಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್, ತಾ.ಪಂ ಮಾಜಿ ಉಪಾಧ್ಯಕ್ಷ ಶೇಖರ ಛಾತ್ರಬೆಟ್ಟು, ಸ್ಥಳೀಯ ಉದ್ಯಮಿ ಕೆ.ಕೆ ಕಾಂಚನ್, ಜಿಲ್ಲಾ ಮೊಗವೀರ ಯುವ ಸಂಘಟನೆ ಕ್ರೀಡಾ ಕಾರ್ಯದರ್ಶಿ ಸತೀಶ್ ದೊಡ್ಡಣಗುಡ್ಡೆ, ಮೊಗವೀರ ಯುವ ಸಂಘಟನೆ ಕೋಟೇಶ್ವರ ವಲಯದ ಅಧ್ಯಕ್ಷ ನಿತ್ಯಾನಂದ ಎಂ. ನಾಯ್ಕಾ, ಕಾರ್ಯದರ್ಶಿ ರಮೇಶ್ ಕಾಂಚನ್, ಶಿವರಾಮ್ ಕೆ, ಎಂ,ಪ್ರಕಾಶ್ ಶೆಟ್ಟಿ ಬೆಳಗೋಡು ಇದ್ದರು.
ಜಿಲ್ಲೆಯ ವಿವಿಧ ಭಾಗದಿಂದ ಬಂದಿದ್ದ 19 ಘಟಕಗಳ ನೂರಾರು ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕ್ರೀಡಾಕೂಟದ ಉದ್ಘಾಟನೆಯ ಮೊದಲು ನಡೆದ ಆಕರ್ಷಕ ಪಥಸಂಚಲನದಲ್ಲಿ ಡಾ.ಜಿ ಶಂಕರ್ ಕ್ರೀಡಾಳುಗಳಿಂದ ಗೌರವ ರಕ್ಷೆ ಪಡೆದರು.