ಧಾರವಾಡ: ಹುಬ್ಬಳ್ಳಿಯ ವಾರ್ಡ್ ಸಂ.27 ವ್ಯಾಪ್ತಿಯ ಸರ್ವೆ ನಂ.68ರಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ನಿವಾಸಿಗಳನ್ನು ತೆರವುಗೊಳಿಸುವ ಕ್ರಮವನ್ನು ಖಂಡಿಸಿ ಸುಭಾನಿ ನಗರ ಹಾಗೂ ಗವಿಸಿದ್ದೇಶ್ವರ ನಗರದ ನೂರಾರು ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಮನೆಗಳು ಅನಧಿಕೃತವಾಗಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ಡಾ.ಕೆ.ರಾಮಚಂದ್ರರಾವ್ ಕಿಮ್ಸ ನಿರ್ದೇಶಕಿ ಡಾ.ವಸಂತಾ ಕಾಮತ್ ಅವರಿಗೆ ಜೂನ್ 6ರಂದು ಪತ್ರ ಬರೆದಿದ್ದು, ಸೂಕ್ತ ಬಂದೋಬಸ್ತ್ ನೀಡಲು ದಿನಾಂಕ ಹಾಗೂ ಸಮಯ ತಿಳಿಸಬೇಕು ಎಂದು ಕೋರಿರುವುದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ. ಕಳೆದ 45 ವರ್ಷಗಳಿಂದ ಈ ಸರ್ವೆ ನಂಬರ್ನಲ್ಲಿ ವಾಸವಾಗಿದ್ದು, ಪಾಲಿಕೆಗೆ ನೀರಿನ ಕರ, ಆಸ್ತಿ ಕರ, ವಿದ್ಯುತ್ ಬಿಲ್ ತುಂಬಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಾಲಿಕೆಯ ಮಾಜಿ ಸದಸ್ಯ ತಿಪ್ಪಣ್ಣ ಮಜ್ಜಗಿ, `ಇಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿವೆ. ಕಿಮ್ಸಗೆ ಲೀಸ್ ಆಧಾರದ ಮೇಲೆ ಅರಣ್ಯ ಇಲಾಖೆ ನೀಡಿದ ಜಾಗ ಯಾವುದು ಎಂಬುದು ತಿಳಿದು ಬಂದಿಲ್ಲ.