ನವದೆಹಲಿ (ಐಎಎನ್ಎಸ್): ಸಂಕಷ್ಟದಲ್ಲಿರುವ ಮನೆ ಮಾಲೀಕರು ತಮ್ಮ ಬಾಡಿಗೆದಾರರನ್ನು ತೆರವುಗೊಳಿಸುವ ಹಕ್ಕನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್, ಇಂಥ ಪ್ರಕರಣವೊಂದರಲ್ಲಿ ಬಾಡಿಗೆದಾರರ ಪರವಾಗಿ ಉತ್ತರಾಂಚಲ ಹೈಕೋರ್ಟ್ ನೀಡಿದ್ದ ಆದೇಶವನ್ನು ಬದಿಗಿರಿಸಿದೆ.
ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ಆರ್.ಪಿ.ದೇಸಾಯಿ ಅವರನ್ನು ಒಳಗೊಂಡ ಪೀಠವು, ತನ್ನ ಇತ್ತೀಚಿನ ತೀರ್ಪಿನಲ್ಲಿ 2005ರ ಸೆಪ್ಟೆಂಬರ್ 12ರಂದು ಉತ್ತರಾಂಚಲ ಹೈಕೋರ್ಟ್ ನೀಡಿದ್ದ ಆದೇಶವನ್ನು `ದೋಷಪೂರಿತ~ ಎಂದು ಹೇಳಿದೆ.
ಸಂಕಷ್ಟದಲ್ಲಿರುವ ಮನೆ ಮಾಲೀಕ ಬಾಡಿಗೆದಾರರನ್ನು ತೆರವುಗೊಳಿಸಲು ಆಗದಿರುವ ಸಂದರ್ಭದಲ್ಲಿ ಹೆಚ್ಚು ನಷ್ಟವಾಗುವುದು ಮಾಲೀಕನಿಗೆ ಹೊರತು ಬಾಡಿಗೆದಾರನಿಗೆ ಅಲ್ಲ. ಬಾಡಿಗೆದಾರ ಒಂದು ಬಾಡಿಗೆ ಮನೆ ಬಿಟ್ಟು ಇನ್ನೊಂದೆಡೆ ಸಾಗುವಾಗಿನ ತೊಂದರೆಗಿಂತಲೂ ಮಾಲೀಕ ತನ್ನ ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳಲಾಗದೇ ಅನುಭವಿಸುವ ತೊಂದರೆಯೇ ಹೆಚ್ಚಿನದು ಎಂದು ಪೀಠ ಹೇಳಿದೆ.