ಚನ್ನಮ್ಮನ ಕಿತ್ತೂರು: ಇಲ್ಲಿಗೆ ಸಮೀಪದ ಉಗರಖೋಡ ಗ್ರಾಮದ ಅಂಗನವಾಡಿ ಕೇಂದ್ರದಿಂದ ಮಹಿಳೆಯೊಬ್ಬಳು ಮನೆಗೆ ಒಯ್ಯುತ್ತಿದ್ದ ಆಹಾರ ಧಾನ್ಯಗಳನ್ನು ಶ್ರೀರಾಮಸೇನಾ ಕಾರ್ಯಕರ್ತರು ಸೋಮವಾರ ವಶಪಡಿಸಿಕೊಂಡಿದ್ದಾರೆ.
`ಪ್ರಾಥಮಿಕ ಶಾಲೆಯ ಆವಣದಲ್ಲಿರುವ 152ನೇ ಕೇಂದ್ರದಿಂದ ಮೇಲ್ವಿಚಾರಕಿ ಗುರುಸಿದ್ಧಮ್ಮ ಕಾಜಗಾರ ಸೂಚನೆ ಮೇರೆಗೆ ನಾಗವ್ವ ಕಾದ್ರೊಳ್ಳಿ ಎಂಬಾಕೆ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ವಿತರಿಸಬೇಕಾಗಿದ್ದ ಬೆಲ್ಲ, ಹೆಸರು, ಗೋದಿ ಮತ್ತಿತರ ಆಹಾರ ಧಾನ್ಯಗಳನ್ನು ಕದ್ದು ಒಯ್ಯುತ್ತಿರುವುದಾಗಿ~ ಆರೋಪಿಸಿದ ಸಂಘಟನೆ ಕಾರ್ಯಕರ್ತರು, ವಸ್ತುಗಳನ್ನೆಲ್ಲ ಅಂಗನವಾಡಿ ಕೇಂದ್ರದ ಮುಂದೆಯಿಟ್ಟು ಪ್ರತಿಭಟನೆ ನಡೆಸಿದರು.
`ಗ್ರಾಮದಲ್ಲಿ ಮೂರು ಅಂಗನವಾಡಿ ಕೇಂದ್ರಗಳಿವೆ. ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ವಿತರಿಸಬೇಕಾಗಿದ್ದ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ಬಹುತೇಕ ವಸ್ತುಗಳು ಮೇಲ್ವಿಚಾರಕಿಯರ ಮನೆ ಸೇರುತ್ತಿವೆ. ಅಲ್ಲಿಂದ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಎ. ಎನ್. ನೀಲಗಾರ ಎದುರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
`ಮಕ್ಕಳಿಗೆ ಪೌಷ್ಟಿಕ ಆಹಾರ ಎಂದು ನೀಡಲಾಗುವ `ಉಂಡಿಪುಡಿ~ ಪ್ರತಿಷ್ಠಿತರ ಮನೆಗಳ ಜಾನುವಾರಗಳಿಗೆ ಒಯ್ದು ತಿನ್ನಿಸಲಾಗುತ್ತಿದೆ. ಇದರಿಂದ ಅವು ಹೆಚ್ಚು ಹಾಲು ಕೊಡುತ್ತವೆ. ಇಂಥದ್ದನ್ನೆಲ್ಲ ನೋಡಿಕೊಂಡು ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತುಕೊಂಡಿದ್ದಾರೆ. `ಇದರಲ್ಲಿ ಸಾಹೇಬರ ನಿಮ್ಗೂ ಶೇ 25 ಕಮಿಷನ್ ಇದೆ ಇಲ್ಲವೋ ಹೇಳಿ~ ಎಂದು ಗ್ರಾಮಸ್ಥನೊಬ್ಬ ಅಧಿಕಾರಿಯನ್ನು ನೇರವಾಗಿ ಪ್ರಶ್ನಿಸಿದರು.
`ತಪ್ಪು ಮಾಡಿರುವ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಸಂಬಂಧಪಟ್ಟ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇವರನ್ನೆಲ್ಲ ಬದಲಾಯಿಸಿ ಆ ಹುದ್ದೆಗೆ ಬೇರೆಯವರನ್ನು ನೇಮಕ ಮಾಡಬೇಕು~ ಎಂದು ಉಮೇಶ ಪೂಜಾರ, ಮಡಿವಾಳಪ್ಪ ಆನಿಗೋಳ, ದೇವೇಂದ್ರ ನಾಗರಾಹುತ, ಮಲ್ಲಿಕಾರ್ಜುನ ನಾಗರಾಹುತ, ಶಿವಾನಂದ ಹುಲಮನಿ, ಗಂಗಯ್ಯ ಪೂಜೇರ, ಬಸನಗೌಡ ನಾಡಗೌಡ ಒತ್ತಾಯಿಸಿದರು.