ಹಾಸನ: ಮನೆಯೊಂದರ ಹಿಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಒಳಗಿದ್ದ ನಗದು ಸೇರಿದಂತೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿಯ ನಿವೃತ್ತ ಕಾರ್ಯದರ್ಶಿ ಪುಟ್ಟೇಗೌಡ ಎಂಬು ವವರ ಮನೆಯಲ್ಲಿ ಕಳ್ಳತನವಾಗಿದೆ.
ಪುಟ್ಟೇಗೌಡ ಅವರ ಪುತ್ರನ ವಿವಾಹ ಈಚೆಗೆ ಪಂಜಾಬ್ನಲ್ಲಿ ನಡೆದಿತ್ತು. ಈ ಸಂಬಂಧ ಹಾಸನದಲ್ಲಿ ಇದೇ ಜೂ. 19ರಂದು ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ಸಂಬಂಧಿಕರು, ಮಿತ್ರರಿಗೆ ಆಮಂತ್ರಣ ನೀಡುವ ಸಲ ವಾಗಿ ಪುಟ್ಟೇಗೌಡ ಅವರು ಕಳೆದ ಭಾನು ವಾರವೇ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಶುಕ್ರವಾರ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ.
ಮನೆಯ ಎಲ್ಲ ಕೋಣೆಗಳೊಳಗೆ ನುಗ್ಗಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ವಸ್ತುಗಳನ್ನೆಲ್ಲ ಚಲ್ಲಾಪಿಲ್ಲಿ ಮಾಡಿದ್ದಾರೆ. ಅಡುಗೆ ಮನೆಯನ್ನೂ ಬಿಡದೆ ಶೋಧ ಮಾಡಿದ್ದಾರೆ.
ಮನೆಯೊಳಗೆ ಇಟ್ಟಿದ್ದ 40ಸಾವಿರ ರೂಪಾಯಿ ನಗದು, ಒಂದು ಡಿವಿಡಿ ಪ್ಲೇಯರ್, ಒಂದು ಕ್ಯಾಮೆರಾ ಸೇರಿದಂತೆ ಒಂದು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ವೃತ್ತ ನಿರೀಕ್ಷಕಿ ಜಯಲಕ್ಷ್ಮಿ, ಇನ್ಸ್ಪೆಕ್ಟರ್ ಭಾನು ಮತ್ತಿತರ ಅಧಿಕಾರಿಗಳು ಮನೆಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.