ಪಡುಬಿದ್ರಿ: ನಾಲ್ಕು ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥನಾಗಿ ಮನೆಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ ಇದೀಗ ಗುಣಮುಖರಾಗಿ ತಾಯಿಯ ಮಡಿಲು ಸೇರಿದ್ದಾರೆ.ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿಯಾಗಿರುವ ದಯಾನಂದ ಶೆಟ್ಟಿ (45) ಅವರು ನಾಲ್ಕು ವರ್ಷಗಳಿಂದ ಶಂಕರಪುರದ ವಿಶ್ವಾಸದ ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಬುಧವಾರ ಮನೆಗೆ ಖುಷಿಯಿಂದ ಮರಳಿದರು.
ನಾಲ್ಕು ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥನಾಗಿ ನಾಪತ್ತೆಯಾಗಿದ್ದ ದಯಾನಂದ ಗುಣಮುಖರಾಗಿ ಇದೀಗ ಅವರ ಮನೆ ಸೇರಿರುವುದು ಅವರ ತಾಯಿ ಶಾರದಾ ಶೆಟ್ಟಿಯ ಅವರ ಸಹೋದರ ಶ್ಯಾಮ್ ಸುಂದರ ಶೆಟ್ಟಿ, ಅತ್ತಿಗೆ ವಾಸಂತಿ ಆನಂದಭಾಷ್ಪ ಸುರಿಸಿ, ವಿಶ್ವಾಸದ ಮನೆಯ ಕಾರ್ಯವನ್ನು ಶ್ಲಾಘಿಸಿದರು.
ಮುಖದಲ್ಲಿ ಗಡ್ಡ ಬೆಳೆದು ಬಂದಿತ್ತು. ಹರಿದು ಹೋಗಿದ್ದ ಬಟ್ಟೆ ಧರಿಸಿದ್ದ ದಯಾನಂದ ಕಲ್ಯಾಣಪುರದ ಸಂತೆಕಟ್ಟೆ ಬಸ್ಸು ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತಿದ್ದ.
2008 ರ ಡಿಸೆಂಬರ್ 9ರಂದು ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಅಲ್ಲಿಗೆ ತೆರಳಿ ಆತನನ್ನು ವಿಶ್ವಾಸದ ಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡುಬರಲಾಯಿತು. ಅವರನ್ನು ಶುಚಿಗೊಳಿಸಿ ಹೊಸ ಬಟ್ಟೆ ತೊಡಿಸಿ ಅಲ್ಲಿನ ಸಿಬ್ಬಂದಿ ಪ್ರೀತಿಯಿಂದ ಆರೈಕೆ ಮಾಡಿದರು. ವೈದ್ಯರು ಅವರನ್ನು ಪರೀಕ್ಷಿಸಿ ಮಾನಸಿಕ ಅಸ್ವಸ್ಥನೆಂದು ದೃಢವಾದ ಬಳಿಕ ಸೂಕ್ತ ಚಿಕಿತ್ಸೆಯನ್ನು ಮಾಡಲಾಯಿತು.
ಆರಂಭದ ದಿನಗಳಲ್ಲಿ ಆತ ತನ್ನ ಹೆಸರನ್ನು ಹೇಳುತಿರಲಿಲ್ಲ. ತುಳುವಿನಲ್ಲಿ ಮಾತನಾಡುತಿದ್ದ. ಆತನನ್ನು ವಿಚಾರಿಸಿದರೂ ಸರಿಯಾಗಿ ಮಾತನಾಡುತಿರಲಿಲ್ಲ. ನಾಲ್ಕು ವರ್ಷಗಳ ನಂತರ ಇದೀಗ ಗುಣಮುಖನಾಗಿದ್ದು, ತನ್ನ ಹೆಸರು ದಯಾನಂದ ಶೆಟ್ಟಿ ತಾನು ಮರದ ಕೆಲಸ ಮಾಡುತಿದ್ದೆ ಎಂದಿದ್ದ. ಬಧವಾರ ಸುರತ್ಕಲ್ ಪೊಲೀಸ್ ಠಾಣೆಯ ಸಹಕಾರದೊಂದಿಗೆ ವಿಳಾಸ ಪತ್ತೆ ಮಾಡಿ ಅವರ ಮನೆಗೆ ತಲುಪಿಸಲಾಯಿತು. ಕಳೆದ ನಾಲ್ಕು ವರ್ಷಗಳಿಂದ ಕಾಣದ ಮನೆಯವರು ಈತನನ್ನು ಪ್ರೀತಿಯಿಂದಲೇ ಸ್ವೀಕರಿಸಿದರು.