ಕೆಂಗೇರಿ: `ಜನಸಾಮಾನ್ಯರಲ್ಲಿ ಬೇರೂರಿರುವ ಮೌಢ್ಯ, ಅಂಧಕಾರ, ಶೋಷಣೆ, ಅಸಮಾನತೆಯನ್ನು ಹೋಗಲಾಡಿಸಲು ಸಾಧನವಾಗಬೇಕಾಗಿದ್ದ ವಚನ ಸಾಹಿತ್ಯವು ಸಂಕುಚಿತ ಮನಸ್ಸುಗಳ ಕಪಿಮುಷ್ಠಿಗೆ ಸಿಲುಕಿ ಮನುಷ್ಯ- ಮನುಷ್ಯರ ನಡುವೆ ಕಂದಕವೇರ್ಪಟ್ಟು ಶರಣರ ಸಮಾನತೆಯ ಸಮಾಜ ನಿರ್ಮಾಣ ಕನಸಾಗಿಯೇ ಉಳಿದಿದೆ~ ಎಂದು ಪ್ರೊಫೆಸರ್ ಟಿ.ಆರ್.ಮಹದೇವಯ್ಯ ವಿಷಾದ ವ್ಯಕ್ತಪಡಿಸಿದರು.
ಕೆಂಗೇರಿ ಉಪನಗರದ ಜಗಜ್ಯೋತಿ ಬಡಾವಣೆಯಲ್ಲಿ ವಚನಜ್ಯೋತಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ವಚನ~ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ನುಡಿದಂತೆ ನಡೆದ ಕಾಯಕಯೋಗಿ ಶರಣರ ಜೀವನ ಕ್ರಮ ಪಾರದರ್ಶಕವಾಗಿದ್ದು, ಅವರು ದೇಹವನ್ನೇ ದೇವಾಲಯವನ್ನಾಗಿಸಿ ಇತರರಿಗೆ ಮಾದರಿಯಾಗಿದ್ದರು. ವಚನಕಾರರು ಮೌಢ್ಯ ಹಾಗೂ ಅರ್ಥವಿಲ್ಲದ ಆಚರಣೆಯನ್ನು ತೊಡೆದು ಹಾಕಿ ವೈಜ್ಞಾನಿಕ ದೃಷ್ಟಿಕೋನದಿಂದ ಅವುಗಳಿಂದ ದೂರ ಉಳಿದಿದ್ದರು~ ಎಂದರು.
ಸಾಹಿತಿ ಚಟ್ನಳ್ಳಿ ಮಹೇಶ್, ಉತ್ತರ ಅಮೆರಿಕದ ವೀರಶೈವ ಸಮಾಜದ ಉಪಾಧ್ಯಕ್ಷ ಶಿವಕುಮಾರ್, ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಕಿರುತೆರೆ ಕಲಾವಿದ ಶಿವಕುಮಾರ್ ಆರಾಧ್ಯ, ಪ್ರಾಧ್ಯಾಪಕ ರುದ್ರೇಶ್, ಗಾಯಕ ರವೀಂದ್ರ ಸೊರಗಾವಿ, ಶಿವಾನಂದ ಹೆರೂರು, ವೀಣಾಮೂರ್ತಿ, ಪ್ರೇಮಾ, ತಬಲ ಕಲಾವಿದ ಸತೀಶ್ ಹಂಪಿಹೊಳ್ಳಿ ಇತರರು ಹಾಜರಿದ್ದರು.
ಡಾ.ಮೃತ್ಯುಂಜಯ ಶೆಟ್ಟರು ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸಂಗೀತದ ಮಾಹಿತಿಗಾಗಿ ಹೊರತಂದಿರುವ ವೆಬ್ಸೈಟ್ ಬಿಡುಗಡೆಗೊಳಿಸಲಾಯಿತು.