ಮೈಸೂರು: ಮೂಳೆ ಸಮಸ್ಯೆಯಿಂದ ಬಳಲುತ್ತಿರುವ ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿ ರಮೇಶ್ ಗೋವಿಂದ ಹೆಗಡೆಗೆ ಮನೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನವೀಯತೆ ಮೆರೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 34 ವರ್ಷದ ರಮೇಶ್ ಗೋವಿಂದ ಹೆಗಡೆ ಹುಟ್ಟಿನಿಂದ `ಆಸ್ಟಿಯೋ ಜೆನಿಸಿಸ್ ಇಂಪರ್ಫೆಕ್ಟಾ' ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೂಳೆ ಮೃದುವಾಗಿದ್ದು, ಕೂರಲು ಸಾಧ್ಯವಿಲ್ಲದಷ್ಟು ದುರ್ಬಲವಾಗಿವೆ. ಹಾಸಿಗೆಯಲ್ಲೇ ಜೀವನ ಸವೆಸುತ್ತಿರುವ ರಮೇಶ್ ಬದುಕುವ ಛಲದಿಂದ ಪ್ರಸಕ್ತ ಸಾಲಿನಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಬಿ.ಎಗೆ ಪ್ರವೇಶ ಪಡೆದಿದ್ದಾರೆ.