ಢಾಕಾ (ಪಿಟಿಐ): ಇಸ್ಲಾಮಿಕ್ ಉಗ್ರವಾದಿಗಳ ಬಗ್ಗೆ ಮೆದು ಧೋರಣೆ ಹೊಂದಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ಬಾಂಗ್ಲಾ ಪ್ರವಾಸದ ನಿಯೋಗದಲ್ಲಿ ಕರೆತರಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿನ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ‘ವೇದಾಂತ ಸಾಂಸ್ಕೃತಿ ಮಂಚೊ’ ಪ್ರಧಾನ ಕಾರ್ಯದರ್ಶಿ ಬಿನಯ್ ಭೂಷಣ್ ಜಾಯ್ಭರ್, ‘ಇಸ್ಲಾಮಿಕ್ ಉಗ್ರಗಾಮಿಗಳು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳ ಮೆದು ಧೋರಣೆಯಿಂದಾಗಿ ಬಾಂಗ್ಲಾದೇಶ ಮತ್ತು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರಬೇಕು. ಎರಡೂ ದೇಶಗಳ ಶಾಂತಿಪ್ರಿಯ ಜನರು ಈ ಬಗ್ಗೆ ಮಾತನಾಡುತ್ತಿದ್ದರೂ ಮೌನ ವಹಿಸಿರುವ ಮಮತಾ ಬಾಯಿಬಿಡಬೇಕು. ಒಂದು ವೇಳೆ ಅವರು ಬಾಂಗ್ಲಾದೇಶಕ್ಕೆ ಬಂದರೆ ಅವರನ್ನು ಹಿಂದಕ್ಕೆ ಕಳುಹಿಸುವವರೆಗೆ ಪ್ರತಿಭಟನೆ ನಡೆಸಬೇಕು’ ಎಂದು ಎಲ್ಲಾ ವಿಮೋಚನಾ ಪರ ಸಂಘಟನೆಗಳನ್ನೂ ಒತ್ತಾಯಿಸಿದರು.
ಈ ವಾರದಲ್ಲಿ ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಅವರ ತಂಡದಲ್ಲಿ ಮಮತಾ ಬ್ಯಾನರ್ಜಿ ಕೂಡಾ ಸೇರಿದ್ದಾರೆ ಎನ್ನಲಾಗಿದೆ.