ಕೋಲ್ಕತ್ತ (ಪಿಟಿಐ): ಅಧಿಕಾರಕ್ಕೆ ಬಂದರೆ ಸಿಂಗೂರು ವಿವಾದ ಬಗೆಹರಿಸುವುದೂ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಉದ್ದಿಮೆಗೆ ಪೂರಕ ವಾತಾವರಣ ಸೃಷ್ಟಿಸಲು ಮಮತಾ ಬ್ಯಾನರ್ಜಿ ಸರ್ಕಾರ ತಮಗೆ ಸಹಕಾರ ನೀಡುವ ವಿಶ್ವಾಸವನ್ನು ನರೇಂದ್ರ ಮೋದಿ ಶುಕ್ರವಾರ ವ್ಯಕ್ತಪಡಿಸಿದ್ದಾರೆ.
‘ಆನಂದಬಜಾರ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ರಾಜ್ಯದ ಅಭಿವೃದ್ಧಿ ವಿಚಾರಕ್ಕೆ ಬಂದಾಗ ತೃಣಮೂಲ ಕಾಂಗ್ರೆಸ್ ಮತಬ್ಯಾಂಕ್ ರಾಜಕೀಯ ಮಾಡದು ಎಂಬ ವಿಶ್ವಾಸ ನನಗಿದೆ’ ಎಂದೂ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನ್ಯಾನೊ ಕಾರು ಯೋಜನೆ ಕುರಿತಾಗಿ ಮಾತನಾಡಿದ ಮೋದಿ, ‘ಟಾಟಾದವರು ತೊಂದರೆಯಲ್ಲಿದ್ದಾಗ ನಾನು ಅವರಿಗೆ ಭೂಮಿ ನೀಡಿದೆ. ಆದರೆ, ಈ ವಿಚಾರದಲ್ಲಿ ನನಗೆ ಅಪರಾಧಿ ಭಾವವಿತ್ತು. ಪಶ್ಚಿಮ ಬಂಗಾಳದಿಂದ ಆ ಯೋಜನೆಯನ್ನು ಕಸಿದುಕೊಳ್ಳುವ ಉದ್ದೇಶ ನನಗಿರಲಿಲ್ಲ’ ಎಂದಿದ್ದಾರೆ.