ಗಾಯನ ಸಮಾಜದಲ್ಲಿ ಮಯೂರ ಸಂಗೀತ ಶಾಲೆಯು ಇತ್ತೀಚೆಗೆ ತನ್ನ 6ನೇ ವಾರ್ಷಿಕೋತ್ಸವವನ್ನು ಆಯೋಜಿಸಿತ್ತು.
ವಾರ್ಷಿಕೋತ್ಸವದಲ್ಲಿ ಸನ್ಮಾನ, ಗಾಯನ, ನೃತ್ಯ ಕಾರ್ಯಕ್ರಮ ಮುಖ್ಯವಾಗಿತ್ತು.
ಗಾಯಕಿ ಬಿ.ಕೆ. ಸುಮಿತ್ರಾ, ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ಹಿರಿಯ ಸಂಗೀತ ನಿರ್ದೇಶಕ ರಾಜನ್ ಮತ್ತು ನಟ ವಿಜಯ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಗಾಯನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಚಪ್ಪಾಳೆಯ ಪ್ರೋತ್ಸಾಹ. ಕಿಶೋರ್, ಮಯೂರ್ ಅವರು ಬಿ.ಆರ್. ಲಕ್ಷ್ಮಣರಾವ್ ಅವರ ‘ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’ ಗೀತೆಯನ್ನು ಹಾಡಿ ರಂಜಿಸಿದರು. ಜ್ಯೋತಿ ರಾಧಾಕೃಷ್ಣ ಮತ್ತು ನಂದಿನಿ ಪ್ರಕಾಶ್ ತಂಡ ಪ್ರಸ್ತುತಪಡಿಸಿದ ನೃತ್ಯ ಮನಮೋಹಕವಾಗಿತ್ತು.
ಯಶ್ ಮ್ಯೂಸಿಕ್ ತಂಡದ ಎಂ.ಡಿ. ಪಲ್ಲವಿ, ಅರ್ಚನಾ ಉಡುಪ, ಉಷಾ ಉಮೇಶ್, ಶ್ರೀದೇವಿ ಕುಳೇನೂರ್, ಮೋಹನ್, ಉದಯ್ ಅಂಕೋಲ ಅವರು ರಾಜನ್ ನಾಗೇಂದ್ರ ಮತ್ತು ಇಳಯರಾಜ ಸಂಗೀತ ನಿರ್ದೇಶನ ಸುಮಧುರ ಗೀತೆಗಳನ್ನು ಹಾಡಿದರು.
ಸಂಗೀತ ಶಾಲೆ ಸಂಸ್ಥಾಪಕ ವಿ.ಉಮೇಶ್, ಪ್ರಾಂಶುಪಾಲರಾದ ಗಾಯತ್ರಿ, ಗಾಯಕ ದತ್ತಾತ್ರೇಯ ವೇಲಣಕರ್ ಮತ್ತಿತರರು ಉಪಸ್ಥಿತರಿದ್ದರು.