ಬೆಂಗಳೂರು: ಕಳೆದ ವರ್ಷ ಬಿಬಿಎಂಪಿಯು 3,000 ಮರಗಳನ್ನು ಧರೆಗುರುಳಿಸಿದೆ. ಅವುಗಳಲ್ಲಿ ಬಹುತೇಕ ಮರಗಳಿಗೆ ತಡರಾತ್ರಿಯಲ್ಲಿ ಕೊಡಲಿ ಹಾಕಲಾಗಿದೆ. ಆದರೆ ಹೊಸದಾಗಿ ಒಂದೂ ಸಸಿಗಳನ್ನು ನೆಡುವ ಕೆಲಸ ಮಾಡಿಲ್ಲ.
ಕರ್ನಾಟಕ ವೃಕ್ಷ ರಕ್ಷಣಾ ಕಾಯಿದೆ 1976ರ 14ನೇ ಸೆಕ್ಷನ್ನ ಅಡಿ ನಗರದ ವೃಕ್ಷಗಳ ಮೇಲ್ವಿಚಾರಣೆಗೆ ಸ್ವತಂತ್ರ ಪ್ರಾಧಿಕಾರವನ್ನು ಮರು ರಚಿಸಬೇಕು ಹಾಗೂ ಪಾಲಿಕೆ ಸದಸ್ಯರನ್ನು ಅದರಿಂದ ಹೊರಗಿಡಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ 2012ರ ನವೆಂಬರ್ನಲ್ಲಿ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಹೊಸ ಪ್ರಾಧಿಕಾರ ರಚಿಸುವವರೆಗೂ ಮರಗಳನ್ನು ಕಡಿಯಲು ಅನುಮತಿ ನೀಡಲು ಪಾಲಿಕೆಗೆ ಯಾವುದೇ ಅಧಿಕಾರವಿಲ್ಲ ಎಂದು ಆದೇಶವು ಸ್ಪಷ್ಟಪಡಿಸುತ್ತದೆ.
ಪ್ರಾಧಿಕಾರದ ರಚನೆಗೆ ಪಾಲಿಕೆ ಮುಂದಾಗದಿದ್ದರೂ ನಿಯಮ ಬಾಹಿರವಾಗಿ ಮರಗಳನ್ನು ಕಡಿಯುತ್ತಿದೆ. ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು, ‘ಸಸಿಗಳನ್ನು ನೆಡುವುದರ ಹೊರತಾಗಿ ಮರಗಳ ಶಿಥಿಲಗೊಂಡ ಭಾಗಗಳನ್ನು ತೆರವುಗೊಳಿಸುವುದಷ್ಟೇ ಪಾಲಿಕೆಯ ಅರಣ್ಯ ವಿಭಾಗದ ಪ್ರಮುಖ ಕೆಲಸ. ಪ್ರಾಧಿಕಾರದ ರಚನೆಯಾದರೆ ವಿಭಾಗಕ್ಕೆ ಯಾವುದೇ ಕೆಲಸವಿರುವುದಿಲ್ಲ. ಆದ್ದರಿಂದ ಪಾಲಿಕೆ ಆಧಿಕಾರಿಗಳು ಪ್ರಾಧಿಕಾರದ ರಚನೆಯನ್ನು ನಿರ್ಲಕ್ಷಿಸಿದ್ದಾರೆ’ ಎಂದು ಹೇಳಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ‘ ವಿಷಯದ ಬಗ್ಗೆ ನನಗೆ ತಿಳಿದಿದೆ. ಆದರೆ ನನ್ನ ಬಳಿಗೆ ಕಡತ ಬಂದಿಲ್ಲ. ಸೋಮವಾರ ಈ ಬಗ್ಗೆ ಗಮನಹರಿಸಿ ಶೀಘ್ರದಲ್ಲಿ ಸಭೆ ಕರೆಯುತ್ತೇನೆ’ ಎಂದರು. ಪಾಲಿಕೆ ಆಯುಕ್ತ ಎಂ. ಲಕ್ಷೀನಾರಾಯಣ, ‘ಪ್ರಾಧಿಕಾರದ ಬಗ್ಗೆ ಪಾಲಿಕೆಯು ಇನ್ನೂ ಗಮನಹರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.