ಬೀದರ್: `ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ನಾಯಕತ್ವವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆ ಯಾಗುವರಿಗೆ ಸ್ವಾಗತ. ಆದರೆ, ಪಕ್ಷವನ್ನು ತ್ಯಜಿಸಿ ಹೋದವರು ಮರಳಿ ಸೇರ್ಪಡೆಗೆ ಬಯಸಿದರೇ ಆ ಬಗೆಗೆ ಚರ್ಚೆ ಅಗತ್ಯ~ ಎಂದು ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಹೊರಹೋದವರು ಮತ್ತೆ ಮರಳಲು ಬಯಸಿದರೆ ಅವರ ವ್ಯಕ್ತಿತ್ವ, ಚಿಂತನೆಗಳನ್ನು ಓರೆಗೆ ಹಚ್ಚಬೇಕು ಎಂದರು.
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂಬುದನ್ನು ತಳ್ಳಿಹಾಕಿದ ಅವರು, ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಜನಪರ ಕಾಳಜಿಯಿಂದಾಗಿ ಬೆಳೆದವರು. ದೇವೇಗೌಡರ ರಾಜಕೀಯ ಅನುಭವ ದೊಡ್ಡದು. ಹೀಗಾಗಿ, ಅಪ್ಪ ಮಕ್ಕಳ ಪಕ್ಷ ಎಂಬುದು ಸರಿಯಲ್ಲ ಎಂದರು.
ಬಿಜೆಪಿ ತರಾಟೆಗೆ: ಆಡಳಿತರೂಢ ಬಿಜೆಪಿ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಚುನಾವಣೋತ್ತರದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಕೈಜೋಡಿಸುವ ಸಾಧ್ಯತೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.
ಹಿಂದೆ ಅನಿವಾರ್ಯ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಕೈಜೋಡಿಸಿದರೂ, ಬಳಿಕ ಅದು ತಪ್ಪು ನಿರ್ಧಾರ ಎಂಬುದು ಅರಿವಾಗಿದೆ. ಬಿಜೆಪಿ ಮುಖಂಡರು ಈಗಾಗಲೇ ಜನತೆ ತಲೆತಗ್ಗಿಸುವಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಯಾವ ಇಲಾಖೆಯೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂಬ ಮಟ್ಟಿಗೆ ಭ್ರಷ್ಟಾಚಾರ ವ್ಯಾಪಿಸಿದೆ ಎಂದರು.
ಇನ್ನೊಂದೆಡೆ, ಕೇಂದ್ರದಲ್ಲಿ ಕಾಂಗ್ರೆಸ್ ಕೂಡಾ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ಗೆ ಭವಿಷ್ಯವಿದೆ ಎಂದರು. ಪ್ರಾದೇಶಿಕ ಪಕ್ಷ ಮೇಲುಗೈ ಸಾಧಿಸುವ ಸಾಧ್ಯತೆಗಳು ಕಾಣುತ್ತಿವೆ ಎಂದರು.
ಜಿಲ್ಲೆಯ ರಘುನಾಥರಾವ್, ಶಿವಾಜಿರಾವ್ ಮತ್ತಿತರರು ಜೆಡಿಎಸ್ಗೆ ಸೇರಿದರು. ಶಾಸಕ ಬಂಡೆಪ್ಪಾ ಕಾಶೆಂಪುರ, ಜಿಲ್ಲಾ ಘಟಕದ ಅಧ್ಯಕ್ಷ ನಸಿಮುದ್ದೀನ್ ಪಟೇಲ್, ಶಾಂತಲಿಂಗ ಸಾವಳಗಿ, ಡಿ.ಕೆ.ಸಿದ್ರಾಮ, ಬಾಬುರಾವ ಮುಡಬಿ, ಶಾಹೀನ್ ಪಟೇಲ್, ಐಲಿನ ಜಾನ್ ಮಠಪತಿ ಅವರು ಇದ್ದರು.
ಬಳಿಕ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಂಧ್ಯಾ ಅವರು, ಪ್ರಸ್ತುತ ರಾಜ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಉತ್ತಮ ಅವಕಾಶವಿದೆ. ಕಾರ್ಯಕರ್ತರು ಹೆಚ್ಚಿನ ಸಕ್ರಿಯವಾಗಿ ಕಾಯ ನಿರ್ವಹಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸಬೇಕು ಎಂದು ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.