ಸಿಂದಗಿ: ತಾಲ್ಲೂಕಿನ ದೇವಣಗಾಂವ, ಕಡ್ಲೇವಾಡ, ಶಂಭೇವಾಡ ಗ್ರಾಮದ ಬಳಿ ಭೀಮಾ ನದಿಯಲ್ಲಿನ ಮರಳನ್ನು ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ಈ ಮೂಲಕ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಲೂಟಿಯಾಗುತ್ತಿದೆ. ಆದಾಗ್ಯೂ ಈ ಬಗ್ಗೆ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯೂ ಕ್ಯಾರೇ ಅನ್ನುತ್ತಿಲ್ಲ.
ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಲೋಕೋಪಯೋಗಿ ಇಲಾಖೆ, ತಹಸೀಲ್ದಾರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳು ಇನ್ನೊಂದು ಇಲಾಖೆಯ ಮೇಲೆ ಹಾಕಿ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದಾರೆ.
ಹೊಸ ಮರಳು ನೀತಿ ಪ್ರಕಾರ ಲೋಕೋಪಯೋಗಿ ಇಲಾಖೆಯದ್ದು ನದಿಯಲ್ಲಿನ ಮರಳು ತುಂಬಿ ಕಳುಹಿಸುವ ಜವಾಬ್ದಾರಿ ಯಷ್ಟೇ ಎನ್ನುತ್ತಾರೆ ಎಇಇ ಅಂಬರೀಶ ಅರಳ ಗುಂಡಗಿ. ಇನ್ನು ತಹಸೀಲ್ದಾರ ಡಾ.ಶಂಕ್ರಣ್ಣ ವಣಕ್ಯಾಳ `ಇದು ಟೀಮ್ ವರ್ಕ್ರೀ ಎಲ್ಲರೂ ಸೇರಿ ಮಾಡಬೇಕು. ನಾನೊಬ್ಬನೇ ಏನು ಮಾಡಲಿ, ನನಗೆ ಇದೊಂದೆ ಕೆಲಸ ವಿಲ್ಲ, ನೂರಾರು ಕೆಲಸ ಗಳಿರುತ್ತವೆ, ಲೋಕೋಪಯೋಗಿ ಇಲಾಖೆ ಅಲ್ಲಲ್ಲಿ ಚೆಕ್ಪೋಸ್ಟ್ ಮಾಡಬೇಕು, ಪೊಲೀಸರು ಅಕ್ರಮವಾಗಿ ಮರಳು ಸಾಗಿಸುವ ವಾಹನಗಳನ್ನು ಜಪ್ತ ಮಾಡಬೇಕು~ ಎನ್ನುತ್ತಾರೆ.
ಇನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಂತೂ ಈ ಬಗ್ಗೆ ತುಟಿ ಬಿಚ್ಚಲು ತಯಾರಿಲ್ಲ. ಪೊಲೀಸ್ ಇನ್ಸ್ಪೆಕ್ಟರ್ ಚಿದಂಬರ ಎಂ. ಇನ್ನು ಮೇಲೆ ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ.
ಹೀಗೆ ಒಬ್ಬರು ಇನ್ನೊಬ್ಬರ ಮೇಲೆ ಹಾಕುತ್ತ ಜವಾಬ್ದಾರಿಯಿಂದ ನುಣಿಚಿ ಕೊಳ್ಳುತ್ತ ಹೊರಟರೆ ಸರ್ಕಾರದ ಕೋಟ್ಯಂತರ ಮೌಲ್ಯದ ಸಂಪನ್ನೂಲ ಹಾಡು ಹಗಲೆ ಲೂಟಿಯಾಗಲಿದೆ. `ಬೆಕ್ಕಿಗೆ ಗಂಟಿ ಕಟ್ಟವವರಾರು? ಎಂಬಂತಾಗಿದೆ ಈ ಸಮಸ್ಯೆ ಎನ್ನುತ್ತಾರೆ ಸ್ಷಳೀಯರು.
ಮರಳು ಮಾಫಿಯಾಗಳು ಭೀಮಾ ತೀರದ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರಿಂದ ಕೆಲವು ಅಧಿಕಾರಿಗಳು ಅಲ್ಲಿಗೆ ಕಾಲಿಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ.
ಮರಳು ಮಾಫಿಯಾ ವಿರುದ್ದ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲು ಮತಕ್ಷೇತ್ರದ ಶಾಸಕರು ಈಚೆಗೆ ಅಧಿಕಾರಿಗಳ ಸಭೆಯೊಂದನ್ನು ಕರೆದು ಎಚ್ಚರಿಕೆ ಕೊಟ್ಟಿದ್ದಕ್ಕೆ ಅವರ ವಿರುದ್ದವೇ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣವೊಂದು ದಾಖಲಾಗಿದೆ. ಹೀಗಾಗಿ ಸಮಸ್ಯೆ ಗಂಭೀರವಾಗಿಯೇ ಉಳಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.