ರಾಣೆಬೆನ್ನೂರು: ಮರಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ನೀತಿಯನ್ನು ಶೀಘ್ರವೇ ಜಾರಿಗೆ ತರುವಂತೆ ಒತ್ತಾಯಿಸಿ ನಗರದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಮಂಗಳವಾರ ಬೃಹತ್ ಪ್ರತಿಭನಾ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ ಹನುಮಂತಪ್ಪ ಬಡಿದಾಳೆ ಅವರಿಗೆ ಮನವಿ ಸಲ್ಲಿಸಿದರು.
ಮೇಡ್ಲೇರಿ ರಸ್ತೆಯ ಚೌಡೇಶ್ವರಿ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭನಾ ಮೆರವಣಿಗೆಯು ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನ ಸೌಧಕ್ಕೆ ತೆರಳಿತು. ಪ್ರತಿಭಟನಾ ಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ಗೌಂಡಿ, ಪ್ಲಂಬರ್, ಪೇಂಟರ್, ಕಾರ್ಪೆಂಟರ್, ಎಲೆಕ್ಟ್ರೀಷಿಯನ್ ಮತ್ತು ಟೈಲ್ಸ್ ಅಳವಡಿಸುವವರು ಸೇರಿದಂತೆ ಸಾವಿರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನಾಗಪ್ಪ ಉಪ್ಪಾರ ಮಾತನಾಡಿ, ಕಟ್ಟಡ ಕಾಮಗಾರಿಗೆ ಕಳೆದ ಮೂರು ನಾಲ್ಕು ತಿಂಗಳಿಂದ ಉಸುಕು ಇಲ್ಲದೇ ತೀವ್ರ ತೊಂದರೆಯಾಗಿ ಕಟ್ಟಡ ಮಾಲೀಕರು ಕಟ್ಟಡ ಬಂದ ಮಾಡಿದ್ದಾರೆ, ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ ಎಂದು ದೂರಿದರು.
ಸರ್ಕಾರ ಕೂಡಲೇ ಮರಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ನೀತಿಯನ್ನು ಶೀಘ್ರವೇ ಜಾರಿಗೆ ತರುವಂತೆ ಒತ್ತಾಯಿಸಿದರು.
ಸರ್.ಎಂ. ವಿಶ್ವೇಶ್ವರಯ್ಯ ಎಂಜಿನಿಯರ್ ಸಂಘದ ಅಧ್ಯಕ್ಷ ಎಂ.ಎಚ್. ಇಚ್ಚಂಗಿ, ಕೆ.ಎನ್. ಷಣ್ಮುಖ, ಪ್ರಭು ಪಾಟೀಲ, ವಿ.ಎಫ್. ಮರಬಸಣ್ಣನವರ, ಮಧು ಕೋಳಿವಾಡ, ಆನಂದ ಗುಜ್ಜರ, ಜನ್ನು, ಅಶೋಕ ಯೋಗಿ, ಸಂಜೀವ ದಾವಣಗೆರೆ, ನಾಗರಾಜ ಪಾಟೀಲ, ಚಂದ್ರಪ್ಪ ಲಮಾಣಿ, ಭೀಮ್ಸಿ ಮೇಸ್ತ್ರಿ, ಭೀಮಪ್ಪ ಲಮಾಣಿ, ನಾರಾಯಣಪ್ಪ, ಹನುಮಂತಪ್ಪ, ಲಕ್ಷ್ಮಣ ಮೇಸ್ತ್ರಿ, ಸುರೇಶ ಮೇಸ್ತ್ರಿ, ನಾರಾಯಣಪ್ಪ ಲಮಾಣಿ, ಪರಶುರಾಮ ಲಮಾಣಿ, ಗಣೇಶ, ದುಗ್ಗಪ್ಪ ಲಮಾಣಿ, ವಸ್ತುದ ಅಹ್ಮದ ರವಾನ್ ಉಪಸ್ಥಿತರಿದ್ದರು.