ಬೆಂಗಳೂರು: ಸಮಗ್ರ ಮರಳು ನೀತಿ ರೂಪಿಸುವಂತೆ ಒತ್ತಾಯಿಸಿ ಮರಳು ಸಾಗಣೆದಾರರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ರಾಜ್ಯದ ಸುಮಾರು 50 ಸಾವಿರ ಲಾರಿಗಳು ಸಂಚಾರ ಸ್ಥಗಿತಗೊಳಿಸಿದವು.
ಮುಷ್ಕರದಿಂದ ಮರಳಿನ ದರ ದುಪ್ಪಟ್ಟಾಗಿದ್ದು ನಿರ್ಮಾಣ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ.
ಖಾಸಗಿ ಕಟ್ಟಡಗಳ ನಿರ್ಮಾಣ ಮಾತ್ರವಲ್ಲದೆ ಸಾರ್ವಜನಿಕ ನಿರ್ಮಾಣ ಕಾರ್ಯಗಳ ಮೇಲೂ ಮುಷ್ಕರ ಪ್ರತಿಕೂಲ ಪರಿಣಾಮ ಬೀರಿದೆ. ಮರಳು ಕಾರ್ಮಿಕರು, ಕಟ್ಟಡ ಕಾರ್ಮಿಕರು ಮೂರು ದಿನಗಳಿಂದ ಕೆಲಸವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದೇ ವೇಳೆ `ಸರ್ಕಾರ ಶನಿವಾರವೂ ಮಾತುಕತೆಗೆ ಮುಂದಾಗಿಲ್ಲ. ಮರಳು ಸಾಗಣೆದಾರರು ಹಾಗೂ ಸಾರ್ವಜನಿಕರ ನೆರವಿಗೆ ಬಾರದೆ ಆಡಳಿತ ನಡೆಸುವವರು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರ ಮಾತುಕತೆಗೆ ಮುಂದಾಗುವವರೆಗೂ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ~ ಎಂದು ರಾಜ್ಯದ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಒಕ್ಕೂಟ ತಿಳಿಸಿದೆ.