ಕೋಲಾರ: ನಗರದ ಸಮೀಪದಲ್ಲಿನ ಅರಹಳ್ಳಿ ಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ಮಂಗಳವಾರ ತಹಶೀಲ್ದಾರ್ ಎಸ್.ಎಂ.ಮಂಗಳಾ ದಿಢೀರ್ ಭೇಟಿ ನೀಡಿ ಶಿಸ್ತಿನ ಕ್ರಮಕ್ಕೆ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅರಹಳ್ಳಿಕೆರೆಯ ನೀರಿನ ಮೂಲಕ ಸುತ್ತಮುತ್ತಲಿನ ಜಮೀನುಗಳಿಗೆ ಹಾಯಿಸಿ ಮರಳು ಫಿಲ್ಟರ್ ಮಾಡುವ ದಂದೆ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಮಂಗಳಾ ಅವರು ಮರಳುಗಾರಿಕೆಗೆ ಬಳಸಲಾಗುತ್ತಿದ್ದ ಅತ್ಯಾಧುನಿಕ ವಾಹನ ವಶಕ್ಕೆ ತೆಗೆದುಕೊಂಡು ಸಂಬಂದಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶಿಸಿದರು.
ಹೂಹಳ್ಳಿಯ ಸಮೀಪದಲ್ಲಿ ಕೆಲವರು ತಮ್ಮ ಜಮೀನಿಗೆ ನೀರು ಹಾಯಿಸಿ ಮರಳು ಫಿಲ್ಟರ್ ಮಾಡುತ್ತಿದ್ದರು. ತಹಶೀಲ್ದಾರ್ ಬರಲಿರುವ ವಿಷಯವನ್ನು ಮುಂಚಿತವಾಗಿಯೇ ತಿಳಿದ ಅವರಿಬ್ಬರೂ ಸ್ಥಳದಿಂದ ನಾಪತ್ತೆಯಾದ ಪರಿಣಾಮ ಮಂಗಳಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಇಟ್ಟಿಗೆ ಕಾರ್ಖಾನೆಗಳಿಗೆ ಪರವಾನಗಿ ರಹಿತವಾಗಿ ಮಣ್ಣು ಸಾಗಿಸುತ್ತಿದ್ದ ವಿಷಯವೂ ಬಯಲಿಗೆ ಬಂದಿದೆ. ಅರಹಳ್ಳಿ ಕೆರೆ ಅಂಗಳದಿಂದ ಇಟ್ಟಿಗೆ ತಯಾರಿಸಲು ಮಣ್ಣನ್ನು ಆಸುಪಾಸಿನ ಇಟ್ಟಿಗೆ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕಾಗಿ ಜೆ.ಸಿ.ಬಿ, ಟಿಪ್ಪರ್ ಮುಂತಾದ ಅತ್ಯಾಧುನಿಕ ಯಂತ್ರಗಳನ್ನು ಸಹ ಬಳಸಲಾಗುತ್ತಿತ್ತು. ಅವುಗಳನ್ನೂ ಸಹಾ ವಶಕ್ಕೆ ತೆಗೆದುಕೊಂಡು ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ಮಂಗಳಾ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳಿಗೆ ಸೂಚಿಸಿದರು.