ಹೊಸದುರ್ಗ: ಜೇನು ಸವಿಯಲು ಕಲ್ಪವೃಕ್ಷವನ್ನೇರಿದ ಜಾಂಬುವಂತ ಜನರ ದಾಂಧಲೆಯಿಂದಾಗಿ ಕೆಳಗಿಳಿಯಲು ಸಾಧ್ಯವಾಗದೆ ಹಗಲಿರುಳೂ ಮರವನ್ನೇ ಆಶ್ರಯಿಸಿದ ಘಟನೆ ತಾಲ್ಲೂಕಿನ ಬಾಗೂರು ಸಮೀಪದ ದೊಡ್ಡರಂಗಯ್ಯನಹಟ್ಟಿ ಗ್ರಾಮದಲ್ಲಿ ಜರುಗಿದೆ.
ಆಹಾರ ಅರಸಿ ಗುಡ್ಡ ಇಳಿದು ನಾಡಿಗೆ ಬಂದ ಕರಡಿ ರಾತ್ರಿ 10 ಗಂಟೆ ಸುಮಾರಿಗೆ ದೊಡ್ಡರಂಗಯ್ಯನಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ತೋಟ ಪ್ರವೇಶಿಸಿದೆ. ತೋಟದಲ್ಲಿರುವ ಸುಮಾರು 35 ಅಡಿ ಎತ್ತರದ ತೆಂಗಿನ ಮರದಲ್ಲಿನ ಹೆಜ್ಜೇನು ಗೂಡು ಕಂಡು ಹಸಿದ ಹೊಟ್ಟೆಯಲ್ಲಿದ್ದ ಕರಡಿ ಹಿಂದು ಮುಂದು ಯೋಚಿಸದೆ ಮರವೇರಿದೆ.
ಕರಡಿ ಮರವನ್ನೇರಿದ ದೃಶ್ಯಕಂಡ ಯವಕನೊಬ್ಬ ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾನೆ. ತೋಟಕ್ಕೆ ಧಾವಿಸಿದ ಜನರು ಕರಡಿ ಮರದಿಂದ ಕೆಳಗಿಳಿದರೆ ಅಪಾಯ ಎಂದು ಅಹೋರಾತ್ರಿ ಬೆಂಕಿ ಹಾಕಿಕೊಂಡು ಕಾವಲು ಕಾದು ಕುಳಿತಿದ್ದಾರೆ.
ಜನರ ದಾಂಧಲೆಯಿಂದಾಗಿ ಗಾಬರಿಯಾದ ಕರಡಿ ತೆಂಗಿನ ಮರದ ಗರಿಗಳನ್ನು ಆಶ್ರಯಸಿಕೊಂಡು ಆಹಾರ ನೀರು ಇಲ್ಲದೆ ಕಾಲ ಕಳೆದಿದೆ. ಬೆಳಗಾಗುತ್ತಲೆ ಹೆಚ್ಚಿನ ಜನರು ತೆಂಗಿನ ತೋಟಕ್ಕೆ ಸೇರಿದ ಕಾರಣ ಮರದಿಂದ ಕೆಳಗಿಳಿಯುವ ಪ್ರಯತ್ನ ಮಾಡದೇ ಅಲ್ಲಿಯೇ ಆಶ್ರಯ ಪಡೆದಿದೆ.
ಕರಡಿ ಮರವೇರಿದ ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರಡಿಗೆ ಯಾವುದೇ ಆಪಾಯ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ರಾತ್ರಿ ವೇಳೆ ಕರಡಿಯನ್ನು ಮರದಿಂದ ಕೆಳಗಿಳಿಸಲು ಏಣಿಗಳನ್ನು ಹಾಕಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.