ದಾವಣಗೆರೆ: ಶಿವಾಜಿ ನಗರದ ದುರ್ಗಾಂಬಿಕಾ ವೃತ್ತದಲ್ಲಿ ಸ್ಥಾಪಿಸಿರುವ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮರಾಠ ಸಮಾಜದ ವತಿಯಿಂದ ನಗರದಲ್ಲಿ ಶುಕ್ರವಾರ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.
ದುರ್ಗಮ್ಮನ ದೇವಸ್ಥಾನದ ಬಳಿಯಿಂದ ಆರಂಭವಾದ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಯಶವಂತರಾವ್ ಜಾದವ್, ಉಪಾಧ್ಯಕ್ಷ ಜಯಣ್ಣ ಜಾದವ್, ಖಜಾಂಚಿ ಮಾಲತೇಶರಾವ್ ಜಾದವ್, ಕಾರ್ಯದರ್ಶಿ ಎನ್.ಎಸ್. ಕೃಷ್ಣಾಜಿರಾವ್ ಸಾವಂತ್, ಸಹ ಕಾರ್ಯದರ್ಶಿ ಪಿ. ಹನುಮಂತರಾವ್ ಸುರ್ವೆ ಮತ್ತಿತರರು ರ್ಯಾಲಿಯ ನೇತೃತ್ವ ವಹಿಸಿದ್ದರು.
ಮುಖ್ಯಮಂತ್ರಿ ಅವರಿಂದ ಅನಾವರಣ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಶನಿವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ 10.30ಕ್ಕೆ ನಗರದ ಜಿಎಂಐಟಿ ಕಾಲೇಜು ಮೈದಾನದ ಹೆಲಿಪ್ಯಾಡ್ಗೆ ಆಗಮಿಸುವರು. ಬೆಳಿಗ್ಗೆ 11ಕ್ಕೆ ಶಿವಾಜಿ ನಗರದ ದುರ್ಗಾಂಬಿಕಾ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡುವರು. ನಂತರ ದೇವರಾಜ ಅರಸ್ ಬಡಾವಣೆ `ಬಿ~ ಬ್ಲಾಕ್ನಲ್ಲಿರುವ ಆಟದ ಮೈದಾನದಲ್ಲಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿರುವ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮ.12.15ಕ್ಕೆ ಚನ್ನಗಿರಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.