ಹಳಿಯಾಳ: ಮಹಿಳೆಯರು ಸಂಘಟಿತರಾಗಿ ಕೆಲಸ ಕಾರ್ಯ ನಿರ್ವಹಿಸುವ ಮೂಲಕ ಪ್ರತಿಯೊಬ್ಬ ಮಗುವಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಮರಾಠಾ ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಹಳಷ್ಟು ಹಿಂದೆ ಉಳಿದಿದ್ದಾರೆ. ಸ್ವ-ಸಹಾಯ ಸಂಘಗಳನ್ನು ರಚಿಸಿ ಅವುಗಳ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಸಲಹೆ ನೀಡಿದರು.
ಸ್ಥಳೀಯ ಮರಾಠಾ ಭವನದಲ್ಲಿ ಶ್ರೀಜೀಜಾಮಾತಾ ಕ್ಷತ್ರೀಯ ಮಾರಾಠಾ ಮಹಿಳಾ ಸಂಘದ ಎರಡನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಹಳಿಯಾಳದಲ್ಲಿ ನಿರ್ಮಾಣವಾದ ಮರಾಠಾ ಭವನಕ್ಕೆ ಎಲ್ಲ ಸಮುದಾಯದವರ ಕೊಡುಗೆ ಇದೆ. ಇಂದು ಮಹಿಳೆಯರು ತಮ್ಮ ಸಂಘದ ಲೆಕ್ಕಪತ್ರವನ್ನು ಬಹಿರಂಗ ಪಡಿಸಿದ್ದಾರೆ. ಆದರೆ, ಮರಾಠಾ ಸಮಾಜದ ಲೆಕ್ಕ ಪತ್ರ ಈವರೆಗೂ ಕೊಡದೇ ಇರುವುದು ವಿಷಾದನೀಯ ಎಂದರು.
ಮುಂದಿನ ತಿಂಗಳೊಳಗಾಗಿ ಹಳಿಯಾಳದಲ್ಲಿ ಛತ್ರಪತಿ ಶಿವಾಜಿ ಮರಾಠಾ ಸಹಕಾರಿ ಬ್ಯಾಂಕ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಮರಾಠಾ ಮುಖಂಡ ವಿಜೇಂದ್ರ ಜಾಧವ, ಮರಾಠಿಗರು ವಲಸೆ ಬಂದವರಲ್ಲ. ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದರೂ ಮರಾಠಿಗರು ಎಲ್ಲ ರೀತಿಯಿಂದಲೂ ಹಿಂದೆ ಉಳಿದಿದ್ದಾರೆ. ಜೀಜಾಮಾತಾ ಮಹಿಳಾ ಮಂಡಳ ಮರಾಠಿ ಮಹಿಳೆಯರಿಗೆ ದಿಕ್ಸೂಚಿಯಾಗಬೇಕು. ಆಗ ಮಾತ್ರ ಮರಾಠಿಗರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಜೀಜಾಮತಾ ಕ್ಷತ್ರೀಯ ಮರಾಠಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲ್ಕರ, ಪ್ರತಿಯೊಂದು ಗ್ರಾಮದಲ್ಲಿಯೂ ಮರಾಠಾ ಮಹಿಳೆಯರನ್ನು ಜಾಗೃತ ಮಾಡುವ ಕಾರ್ಯದಲ್ಲಿ ಸಂಘ ನಿರತವಾಗಿದೆ. ಧರ್ಮಕ್ಕಾಗಿ ಹಾಗೂ ಮರಾಠಿಗರ ಅಭಿವೃದ್ಧಿಗಾಗಿ ಮರಾಠಾ ಮಹಿಳಾ ಸಂಘ ಸದಾ ಕಾರ್ಯನಿರತವಾಗಿದೆ ಎಂದು ತಿಳಿಸಿದರು.
ಯಡೋಗಾ ಮಠದ ಮಾತಾ ನಿರ್ಮಲಾನಂದ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಮರಾಠಾ ಸಮಾಜದಿಂದ ಶೈಕ್ಷಣಿಕ ರಂಗದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿದರು.
ಉಪಾಧ್ಯಕ್ಷೆ ಶ್ಯಾಮಲಾ ಪಾಟೀಲ, ಶಾಂತಾ ಹಿರೇಕರ, ಅನಿತಾ ಪಾಟೀಲ, ಭಾರತಿ ಘೇವಡಿ, ತನುಜಾ ಕಾಂಬ್ರೇಕರ, ಲತಾ ಅಸೂಕರ, ಸುರೇಖಾ ಫಾಕ್ರಿ, ಶ್ರೀದೇವಿ ವಾಡಕರ, ಲಕ್ಷ್ಮೀ ಗುಂಡುಪ್ಕರ ಇತರರಿದ್ದರು. ಭಾರತಿ ಬಿರ್ಜೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.