ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿಯಾಪುರದಲ್ಲಿ ಯೇಸು ಮಹಿಮೆ

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬನ್ನೇರುಘಟ್ಟ ಬೆಟ್ಟದ ಪಶ್ಚಿಮ ಬುಡದಲ್ಲಿ ಹಸಿರುಹೊತ್ತ ಮರಿಯಾಪುರ ಗ್ರಾಮಕ್ಕೆ ಈಗ 127 ವರ್ಷ. ಇದನ್ನು ತಲುಪಲು ಬೆಂಗಳೂರು ಕನಕಪುರ ಹೆದ್ದಾರಿಯಲ್ಲಿ ಕಗ್ಗಲೀಪುರದ ಬಳಿ ತಿರುಗಬೇಕು.

ಆರ್ಟ್ ಆಫ್ ಲಿವಿಂಗ್ ಬಳಿ ಉದಿಪಾಳ್ಯದಿಂದ ಒಂದು ಕಿಲೊಮೀಟರು ಮುಂದೆ ಸಾಗಿದರೆ ಸಿಗುವ ಕಗ್ಗಲೀಪುರ ಒಂದು ಜಂಕ್ಷನ್ ಎನ್ನಬಹುದು. ಅಲ್ಲಿಂದ ಎಡಕ್ಕೆ ನಾಲ್ಕೈದು ಕಿ.ಮೀ ಒಳ ದಾರಿಯಲ್ಲಿ ಗುಳಕಮಲೆ, ತರಳು ದಾಟಿ ಮುಂದೆ ಹೋದಾಗ ಸಿಗುವುದೇ ಮರಿಯಾಪುರ.

ಶತಮಾನಕ್ಕೂ ಹಿಂದೆ ಪ್ಲೇಗ್ ಮತ್ತು ಕ್ಷಾಮದ ಹೆಮ್ಮಾರಿಗೆ ಸಿಲುಕಿ ಇಲ್ಲಿದ್ದ ತಟ್ಟಗುಪ್ಪೆ ಎಂಬ ಊರು ನಿರ್ಜನವಾದಾಗ ಫ್ರೆಂಚ್ ಮಿಷನರಿ ಫಿಲಿಪ್ ಸಿಜನ್ ಅವರು ಮಹಾರಾಜರಿಂದ ಈ ಊರನ್ನು ಪಡೆದು 1884ರಲ್ಲಿ ಮರುನಿರ್ಮಾಣ ಮಾಡಿದರು. ಅದೇ ಈಗಿನ ಮರಿಯಾಪುರ.

ನೂರಕ್ಕೆ ನೂರು ಕ್ರೈಸ್ತರೇ ವಾಸಿಸುವ ಇಲ್ಲಿನ ಅಚ್ಚರಿಯ ಸಂಗತಿಯೆಂದರೆ ಪರದೆಯಿಲ್ಲದೆ ನಡೆಯುವ ಧ್ವನಿ ಬೆಳಕಿನ ಬೃಹನ್ನಾಟಕ.ಸುಗ್ಗಿ ಕಳೆದ ನಂತರದ ವಿರಾಮದ ದಿನಗಳಲ್ಲಿ ಕ್ರೈಸ್ತ ಜನಪದರು ನಾಟಕ, ಕೋಲಾಟ, ಗೀತಗಾಯನಗಳಲ್ಲಿ ತೊಡಗಿಕೊಳ್ಳುವುದಕ್ಕೆ ತಪಸ್ಸು ಕಾಲವು ಇಂಬುಗೊಡುತ್ತದೆ. ಯೇಸು ಸ್ವಾಮಿಯ ಕೊನೆಯ ಗಳಿಗೆಗಳನ್ನು ಮನನ ಮಾಡುವ ತ್ಯಾಗ ನೇಮಗಳ ದಿನಗಳನ್ನು ತಪಸ್ಸು ಕಾಲ ಎನ್ನುತ್ತಾರೆ. ಈ ದಿನಗಳಲ್ಲಿ ಬೇಗೂರು, ಕಾಮನಹಳ್ಳಿ, ದೊರೆಸಾನಿಪಾಳ್ಯ, ವೀರನಪಾಳ್ಯ, ಆರೋಬೆಲೆ, ಮರಿಯಾಪುರಗಳಲ್ಲಿ ಕ್ರೈಸ್ತರಿಂದ ನಡೆಯುವ ನಾಟಕಗಳು ಪ್ರಸಿದ್ಧವಾದವು.

ದೊರೆಸಾನಿಪಾಳ್ಯದ ಡ್ರಾಮಾ ಮಾಸ್ತರ್ ದಾವಿದಪ್ಪನವರಲ್ಲಿ ‘ಜೋಸೆಫ್ ಮತ್ತು ಹನ್ನೆರಡು ಸಹೋದರರು, ಜ್ಞಾನಸುಂದರಿ, ಅಲ್ಫೋನ್ಸೆ, ಗುಣಸುಂದರಿ, ಯೂಸ್ತಾಕಿಯುಸ್, ಜೂಡಿತಮ್ಮ, ಎಸ್ತೆರಮ್ಮ’ ಮುಂತಾದ ಕ್ರೈಸ್ತ ನಾಟಕಗಳ ಹಸ್ತಪ್ರತಿಗಳನ್ನು ಈಗಲೂ ಕಾಣಬಹುದು.
ಅರ್ಕಾವತಿ ದಂಡೆಯ ಆರೂಬೆಲೆಯಲ್ಲಿ ಶುಭ ಶುಕ್ರವಾರ ಮತ್ತು ಪವಿತ್ರ ಶನಿವಾರ ರಾತ್ರಿ ಆಡುವ ‘ಯೇಸುಕ್ರಿಸ್ತನ ಮಹಿಮೆ’ ನಾಟಕ ಈಗಲೂ ಪ್ರಸಿದ್ಧ.

ಇವೆಲ್ಲವುಗಳ ನಡುವೆ ಮರಿಯಾಪುರದ ಧ್ವನಿ ಬೆಳಕಿನ ನಾಟಕಕ್ಕೆ ಹೊಸ ಹೊಳಪಿದೆ. ಸ್ವಾಮಿ ಫಿಲಿಪ್ ಸಿಜನ್ ಅವರ ನೆನಪು ಚಿರಸ್ಥಾಯಿಯಾಗಿಸುವ ಗ್ರಾಮಸ್ಥರ ಪ್ರಯತ್ನದಿಂದಾಗಿ ಈ ನಾಟಕವು ಹೊಸ ರೂಪ ತಳೆದಿದೆ.

ಗ್ರಾಮದ ಚರ್ಚ್‌ನ ಹಿಂಬದಿಯ 125 ಮೀಟರು ಉದ್ದದ ದಿಬ್ಬದ ಮೇಲೆ ವಿಶಾಲ ವೇದಿಕೆ ನಿರ್ಮಿಸಿ ಇಡೀ ರಾತ್ರಿ ಆಡಲಾಗುವ ಈ ನಾಟಕದಲ್ಲಿ 350 ನಟ ನಟಿಯರು, ಸುಮಾರು 500 ಬಾಲ ಬಾಲೆಯರು ಹೆಜ್ಜೆ ಹಾಕುತ್ತಾರೆ. 200ಕ್ಕೂ ಹೆಚ್ಚು ಸ್ಪಾಟ್‌ಲೈಟ್ ಹಾಗೂ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಹತ್ತು ಸಾವಿರ ವ್ಯಾಟ್‌ಗಳ ಸ್ಪಷ್ಟ ಧ್ವನಿ ನಾಟಕಕ್ಕೆ ವಿಶೇಷ ಪರಿಣಾಮ ತುಂಬುತ್ತದೆ.

ಯೇಸುವಿನ ಜೀವನವನ್ನು ಕೇಂದ್ರವಾಗಿಸಿಕೊಂಡು ಇಡೀ ಬೈಬಲನ್ನು ಸುಮಾರು ಆರೂವರೆ ಗಂಟೆಗಳ ಕಾಲ ಚಿತ್ರಿಸುತ್ತ ಅಂದಿನ ಕಾಲದ ವೇಷಭೂಷಣಗಳನ್ನು ಬಳಸಲಾಗುತ್ತದೆ. ಜೊತೆಗೆ ದನ ಕರು, ಕುರಿ, ಕತ್ತೆ, ಒಂಟೆ, ಕುದುರೆ, ರಥಗಳು ಹಾಗೂ ಎತ್ತಿನ ಗಾಡಿಗಳು ಬೃಹತ್ ವೇದಿಕೆ ಮೇಲೆ ಬಂದು ಹೋಗುವುದು ಚಿತ್ತಾಕರ್ಷಕವಾಗಿರುತ್ತದೆ.

ನಾಟಕಕ್ಕೆ ಪ್ರತಿ ವರ್ಷವೂ ಅಪಾರ ಜನರು ಬರುತ್ತಿರುವುದರಿಂದ ಈ ಸಾರಿ ಮೂವತ್ತು ಸಾವಿರ ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸಲು ಪೊದೆಗಳನ್ನು ಸವರಿ ನೆಲವನ್ನು ಸಮತಟ್ಟು ಮಾಡಿ ದೂಳು ಏಳದಂತೆ ಸಿದ್ಧಗೊಳಿಸಲಾಗಿದೆ. ಪ್ರೇಕ್ಷಕರು ಚಾಪೆ, ಶಾಲು, ಮೆತ್ತೆ ಹಾಗೂ ಕುಡಿಯಲು ನೀರು ಒಯ್ದರೆ ಒಳ್ಳೆಯದು. ವಾಹನ ನಿಲುಗಡೆಗೆ ಸುಮಾರು ಮೂರು ಎಕರೆ ಬಯಲು ಸಜ್ಜುಗೊಂಡಿದೆ.

ಕಲಾಸಿಪಾಳ್ಯದಿಂದ 214 ಎ, ಬಿ, ಸಿ, ಇ, ಜಿ, ಹೆಚ್ ಹಾಗೂ ಶಿವಾಜಿನಗರದಿಂದ 214 ಎ ಬಸ್‌ಗಳಲ್ಲಿ ಗ್ರಾಮಕ್ಕೆ ತಲುಪಬಹುದು. ಅಲ್ಲದೆ ಬಿಎಂಟಿಸಿ ಹೆಚ್ಚುವರಿ ಬಸ್ ಕಲ್ಪಿಸಿದೆ. ನಗರದ ಜಂಜಡಗಳನ್ನು ಮರೆತು ಹಳ್ಳಿಗಾಡಿನ ನಿರಭ್ರ ಆಗಸದ ಕೆಳಗೆ ಶುದ್ಧ ಗಾಳಿ ಸೇವಿಸುತ್ತಾ ರಾತ್ರಿ ಕಳೆಯುವ ಈ ಅನುಭವ ನಿಜಕ್ಕೂ ಚೇತೋಹಾರಿ.

ಶನಿವಾರ ರಾತ್ರಿ ‘ಯೇಸು ಸ್ವಾಮಿಯ ಮಹಿಮೆ‘ (ನಿ: ತೋಮಾಸ್) ನಾಟಕ. ಮೊದಲ ಮೂರು ಅಂಕಗಳಲ್ಲಿ ಕ್ರಿಸ್ತಪೂರ್ವ ಕಾಲದ ಜನಜೀವನ ಹಾಗೂ ಯೇಸು ಕ್ರಿಸ್ತರ ಆಗಮನದ ಮುನ್ಸೂಚನೆಗಳ ಆಖ್ಯಾಯಿಕೆ. ನಂತರದ ಹತ್ತು ಅಂಕಗಳಲ್ಲಿ ಯೇಸುವಿನ ಜೀವನ, ಬೋಧನೆ, ಶಿಲುಬೆಯಾತ್ರೆ, ಆತ್ಮಾಹುತಿ, ಪುನರುತ್ಥಾನ. ಕೊನೆಯ ಎರಡು ಅಂಕಗಳಲ್ಲಿ ಮೃತ್ಯುಂಜಯ ಯೇಸುವಿನ ಕೊನೆಯ ಸಂದೇಶ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT