ಇಸ್ಲಾಮಾಬಾದ್ (ಪಿಟಿಐ): ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮರುತನಿಖೆಗಾಗಿ ಜುಲೈ 25ರೊಳಗೆ ಸ್ವಿಟ್ಜರ್ಲೆಂಡ್ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಬೇಕೆಂದು ನೂತನ ಪ್ರಧಾನಿಗೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.
ಇದರೊಂದಿಗೆ ರಾಷ್ಟ್ರದಲ್ಲಿ ಮತ್ತೊಮ್ಮೆ ರಾಜಕೀಯ ಸಂಘರ್ಷದ ಸನ್ನಿವೇಶ ನಿಚ್ಚಳವಾಗಿದೆ.
ಕಾನೂನು ತಜ್ಞರೊಂದಿಗೆ ಅಥವಾ ಸರ್ಕಾರದೊಳಗೆ ಮರು ಚರ್ಚೆ ಮಾಡದೆ ಈ ಕಾರ್ಯ ಮಾಡಬೇಕು ಎಂದು ನ್ಯಾಯಮೂರ್ತಿ ಆಸಿಫ್ ಸಯೀದ್ ಖಾನ್ ಖೋಸಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಸ್ಪಷ್ಟಪಡಿಸಿದೆ.
ಪ್ರಧಾನಿ ರಜಾ ಪರ್ವೇಜ್ ಅಶ್ರಫ್ ಅವರು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯವು ಅವರ ವಿರುದ್ಧ ಸಂವಿಧಾನದ ಅಡಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಲಾಗಿದೆ.25ರಂದು ವಿಚಾರಣೆ ನಡೆಯುವ ವೇಳೆ, ಕೋರ್ಟ್ನ ಆದೇಶ ಪಾಲಿಸಿರುವುದರ ಕುರಿತು ವರದಿ ಲಗತ್ತಿಸುವಂತೆಯೂ ನ್ಯಾಯಪೀಠ ಸೂಚಿಸಿದೆ.