ನವದೆಹಲಿ(ಐಎಎನ್ ಎಸ್): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಕುರಿತು ಬಿಜೆಪಿ ಮುಂದಿಟ್ಟಿದ್ದ ಪ್ರಸ್ತಾವವನ್ನು ಶಿವಸೇನೆ ಮರು ಪರಿಶೀಲಿಸಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಸೋಮವಾರ ಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕರೆ ಕೊಟ್ಟಿದ್ದಾರೆ.
‘ಹೊಂದಾಣಿಕೆ ವಿಚಾರವಾಗಿ ಎರಡೂ ಪಕ್ಷಗಳ ಮೈತ್ರಿ ಮುರಿದುಕೊಳ್ಳುವುದು ಬೇಡ’ ಎಂದು ಅಮಿತ್ ಷಾ ಅವರು ಠಾಕ್ರೆ ಅವರಿಗೆ ಕರೆ ನೀಡಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
‘ವಿಧಾನಸಭೆ ಚುನಾವಣೆಯಲ್ಲಿ ೨8೮ ಸ್ಥಾನಗಳ ಪೈಕಿ ಬಿಜೆಪಿಗೆ ೧೧೯ ಸ್ಥಾನಗಳಿಗಿಂತ ಹೆಚ್ಚಿಗೆ ಕೊಡುವ ಮಾತೇ ಇಲ್ಲ’ ಎಂದು ಶಿವಸೇನಾ ಭಾನುವಾರ ಕಡ್ಡಿಮುರಿದಂತೆ ಹೇಳಿತ್ತು. ಬಿಕ್ಕಟ್ಟು ಶಮನಕ್ಕೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾನುವಾರ ರಾತ್ರಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಲಾಗಿತ್ತು. 151-199 ಸ್ಥಾನಗಳ ಸೂತ್ರವನ್ನು ಮುಂದಿಟ್ಟಿದ್ದ ಸೇನೆಯ ನಿರ್ಧಾರವನ್ನು ಬಿಜೆಪಿ ತಳ್ಳಿಹಾಕಿತ್ತು.
288 ಸ್ಥಾನಗಳ ಪೈಕಿ ಬಿಜೆಪಿ 135 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿತ್ತು. ಆದರೆ, ಸೇನೆಯು ಬಿಜೆಪಿಗೆ 119ಕ್ಕಿಂತ ಹೆಚ್ಚಿನ ಸ್ಥಾನ ಕೊಡುವ ಮಾತೇ ಇಲ್ಲ ಎಂದು ಹೇಳಿತ್ತು. ಅ. 15ರಂದು ಚುನಾವಣೆಗೆ ಮತದಾನ ನಡೆಯಲಿದ್ದು, ಸೆ. 27 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಹೀಗಾಗಿ, ಸೇನೆ-ಬಿಜೆಪಿ ನಡುವಿನ 25 ವರ್ಷಗಳ ಮೈತ್ರಿ ಮುರಿದು ಬೀಳುವ ಅಥವಾ ಉಳಿಸಿಕೊಳ್ಳುವಲ್ಲಿ ಸ್ಥಾನ ಹಂಚಿಕೆ ಮಹತ್ವ ಪಡೆದಿದೆ.