ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ನಡೆಯುತ್ತಿರುವ ಚಳವಳಿಯ ಕೇಂದ್ರ ಸ್ಥಾನವಾದ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಕೆಲವು ದಿನಗಳ ಶಾಂತಿಯ ನಂತರ ಮತ್ತೆ ಹಿಂಸಾಚಾರ ತಲೆ ಎತ್ತಿದೆ.
ವಿವಿ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆಗಿಳಿದ ತೆಲಂಗಾಣಪರ ಪ್ರತಿಭಟನಾಕಾರರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು, ಐದು ಬಸ್ ಮತ್ತು ಪೊಲೀಸ್ ಟೆಂಟ್ಗಳಿಗೆ ಬೆಂಕಿ ಹಚ್ಚಿದರು. ಸುಮಾರು 200ರಷ್ಟಿದ್ದ ಪ್ರತಿಭಟನಾಕಾರರು ಗುಂಪುಗುಂಪಾಗಿ ವಿವಿ ಆವರಣದುದ್ದಕ್ಕೂ ಇರುವ ರಸ್ತೆಗಳಲ್ಲಿ ವಾಹನಗಳಿಗೆ ಕಲ್ಲುಗಳನ್ನು ತೂರಿದ್ದು ನಂತರ ಎರಡು ಆರ್ಟಿಸಿ ಬಸ್ಗಳು ಮತ್ತು ಮೂರು ಖಾಸಗಿ ಬಸ್ಸುಗಳಿಗೆ ಬೆಂಕಿ ಹಚ್ಚಿದರು. ಆ ನಂತರ ವಿವಿ ಆವರಣದಲ್ಲಿರುವ ಪೊಲೀಸ್ ಟೆಂಟ್ಗೆ ಬೆಂಕಿ ಹಚ್ಚಿದರು.