ಹರಪನಹಳ್ಳಿ: ಅನಿರೀಕ್ಷಿತ ಘಟನೆಗಳಿಗೆ ಸಿಲುಕಿ ಸಾವು-ಬದುಕಿನ ನಡುವೆ ಸೆಣೆಸಾಟ ನಡೆಸುತ್ತಿರುವ ರೋಗಿಗೆ ನಾವು ಕೊಡುವ ಒಂದು ಹನಿ ರಕ್ತ ಆತನ ಪುನರ್ಜನ್ಮಕ್ಕೆ ಸಂಜೀವಿನಿಯಾಗುತ್ತದೆ ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಮಲ್ಕಪ್ಪ ಅಧಿಕಾರ್ ಅಭಿಪ್ರಾಯಪಟ್ಟರು.
ಬುಧವಾರ ಸ್ಥಳೀಯ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯದಲ್ಲಿ ಕಲಾ ಭಾರತಿ ಸಂಸ್ಥೆ, ಎಂ.ಪಿ. ಪ್ರಕಾಶ್ ಅಭಿಮಾನಿ ಬಳಗ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ್ ಹುಟ್ಟುಹಬ್ಬದ ಪ್ರಯುಕ್ತ `ಎಂ.ಪಿ. ಪ್ರಕಾಶ್-72 ನಾಟಕೋತ್ಸವ ಹಾಗೂ ಜಾನಪದ ಜಾತ್ರೆ~ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಪಘಾತ, ಹೆರಿಗೆಯಂತಹ ತುರ್ತು ಸಂದರ್ಭಗಳು ಸೇರಿದಂತೆ ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಹವ್ಯಾಸಗಳು ಮನುಷ್ಯನ ಆರೋಗ್ಯದ ಮೇಲೆ ನಿರಂತರವಾಗಿ ಅಕ್ರಮಣ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ರಕ್ತಹೀನತೆಯಿಂದ ಬಳಲುತ್ತ ಜೀವನ್ಮರಣದಲ್ಲಿರುವ ವ್ಯಕ್ತಿಗೆ ಆ ಘಳಿಗೆಯಲ್ಲಿ ರಕ್ತದ ಅಗತ್ಯತೆ ಜರೂರಾಗಿರುತ್ತದೆ. ಹೀಗಾಗಿ, ಆರೋಗ್ಯವಂತ ಯುವಕರು ಮೌಢ್ಯತೆಗಳನ್ನು ಬದಿಗಿರಿಸಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಶೇ. 50ಕ್ಕೂ ಅಧಿಕ ರಕ್ತನಿಧಿ ಕೇಂದ್ರಗಳು ಅನಧಿಕೃತವಾಗಿ ಹುಟ್ಟಿಕೊಂಡಿವೆ. ರಕ್ತನಿಧಿ ಸಂಗ್ರಹದಂತಹ ಪವಿತ್ರ ಕಾಯಕದಲ್ಲಿಯೂ ಅನಧಿಕೃತ ದಂಧೆ ಆರಂಭವಾಗಿರುವುದು ವಿಷಾದನೀಯ ಸಂಗತಿ. ಹೀಗಾಗಿ, ಇಂತಹ ಅನಧಿಕೃತ ಸಂಸ್ಥೆಗಳು ಸಂಗ್ರಹಿಸಿರುವ ಸಾವಿರಾರು ಲೀಟರ್ ರಕ್ತ ವ್ಯರ್ಥವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ವೈದ್ಯಾಧಿಕಾರಿ ಡಾ.ಎಚ್.ಡಿ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ವಿವಿಧ ಬ್ಲಾಕ್ ಸಮಿತಿ ಅಧ್ಯಕ್ಷರಾದ ಬಿ.ಕೆ. ಪ್ರಕಾಶ್, ಎಚ್.ಕೆ. ಹಾಲೇಶ್, ಎಸ್. ಮಂಜುನಾಥ, ಹಿರಿಯ ವಕೀಲರಾದ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಮತ್ತಿಹಳ್ಳಿ ಅಜ್ಜಣ್ಣ, ಕಲಾಭಾರತಿ ಸಂಸ್ಥೆಯ ಅಧ್ಯಕ್ಷ ರಿಯಾಜ್ ಉಲ್ಲಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.