ಅಗೆದು ತೋರುವೆ ಬಾರ, ಬಸವಡಣ್ಣಾಯಕ:
ಬೆವರು ನುಂಗಿದ ಮೈಯಿ,
ಬಯಲ ಹೀರಿ ಹೀರಿ ಕುಳಿವೋದ ಕೆನ್ನೆಗಳು:
ತಲೆಗೂದಲಿನ ಕಾನನದ ಕೆಳಗೆ
ಖನಿಜಗಳ ಖನಿ ತೆಗೆತೆಗೆದು ತೋರುವ ಮೊದಲು
ಇಕೊ ಬಸವ
ಈ ಸುಟ್ಟ ಕಣ್ಣುಗಳ ಮಧ್ಯೆ
ಬೆಳ್ಳಿಬೆಳಕುಲಿವ ಪರುಷದ ಪಕ್ಷಿ
ಮಹಾಮನೆಯ ಪಂಜರಕೆ
ಸಿಗದಷ್ಟು ಕಿರಿದು.
ಅವಶೇಷಗಳ ಗಾಳಿ ಹುಯ್ಯಲಿನಲ್ಲಿ ಸತ್ಯವನೆರೆದೆ:
ಬೆಟ್ಟಗಳಿಗೆಣೆಯಾಗಿ ಕೊಬ್ಬಿದ ನದಿಯ,
ಬಡಬಾಗ್ನಿ ಸೀಳಿದ ಸಮುದ್ರದ ಬಸಿರಿನ ನೀರು
ಮಗದೊಮ್ಮೆ
ದೋಣಿ ಹಡಗುಗಳ ತಳದ ಸೋಂಕಲ್ಲಿ
ಪುಳಕಗೊಂಬುದ ಕಂಡೆ.
ನಿನ್ನಂಗಳದ ಪ್ರಸಾದಕುಳದೆಂಜಲೆಲೆ ದಡದಲ್ಲಿ
ನಾ-ಹಡಗನಪ್ಪಳಿಸಿ ಗಳಿಸಿ ಬದುಕಿದ ವಣಿಜ
ಮರುಳ ಶಂಕರದೇವ. ಹಡಗಲ್ಲ,
ಕಜ್ಜಿನಾಯಿಯ ತುರಿತುರಿ ಮೈಯ್ಯ
ದಿಕ್ಕೆಟ್ಟ ಮೋಡಗಳ ಹರುಕನ್ನು ಹೊತ್ತ
ಮರೆವ ಹಿಂದಣ ಮರಣ
ಮರುಳ ಶಂಕರದೇವ.
ಎರಡು ಈ ಕಣ್ಣಗೊಂಬೆಯ ಸೂತ್ರದ
ಈ ಕಳ್ಳ ನಗುವಿನ ಸವಿಯ ಸಾರದ
ಈ ಮೈಗೆ ಬಿದ್ದ ಕೂರೆಗಳ ಪಡೆಯ
ಹಡೆದ ಕರುಳಿರದ ತಾಯಿ
ಮಹಾಮನೆಯ ಲಕ್ಷ್ಮಿ ಬಸವಾ.
ಮಲತಂಗಿ ಬಸವಾ ಆಕೆ
ಕಲಚೂರ್ಯ ವಿಜಯಲಕ್ಷ್ಮಿಗೆ.
ಬೂದಿಹುಬ್ಬುಗಳ ಮರುಳ ಶಂಕರಗೀಗ
ಕಂಗಳೇ ಪ್ರಾಣ;
ಕಾಯುವಿಕೆ ಕಾಯಿ ಮಾಗಿತ್ತು ಈ ಹೊತ್ತು;
ಹಣ್ಣು ರಸವೂರುತಿದೆ; ತೊಟ್ಟುಗಳಚುವ ಮೊದಲೆ
ಕಿತ್ತು ಒಪ್ಪಿಸು ನಿನ್ನ ಶರಣ ಸಂದೋಹಕ್ಕೆ. ಹಣ್ಣಲ್ಲ,
ಮಣ್ಣು ಹುಳುಗಳ ಹಬ್ಬ.