ಹೊಳೆನರಸೀಪುರ: ‘ಜನರು ನಮ್ಮ ಹಳ್ಳಿಗಳ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಜನರಲ್ಲಿ ಆತ್ಮೀಯತೆಯ ಭಾವನೆ ಇಲ್ಲದೆ ದ್ವೇಷ ಅಸೂಯೆ ಹೆಚ್ಚಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪಿ.ಕೆ. ಅಚ್ಚಯ್ಯ ವಿಷಾದ ವ್ಯಕ್ತಪಡಿಸಿದರು.
ಸ್ಫೂರ್ತಿ ಡಿಎಡ್ ಕಾಲೇಜಿನಲ್ಲಿ ಕಡುವಿನಹೊಸಹಳ್ಳಿ ಕೀರ್ತಿ ಯುವಕ ಸಂಘ ಹಾಗೂ ನೆಹರು ಯುವಕ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಾಜದ ಓರೆ ಕೋರೆಗಳನ್ನು ತಿದ್ದುವ ಸಲಹೆಗಳಿರುತ್ತಿತ್ತು. ಆದರೆ ಇಂದು ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಟಿ. ಪುಟ್ಟರಾಜು ಮಾತನಾಡಿ, ಹಿಂದೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ನಾಟಕಗಳು, ಕ್ರೀಡೆಗಳು, ಇಂದು ಎಲ್ಲಿಯೂ ನಡೆಯುತ್ತಿಲ್ಲ. ಹಳ್ಳಿಯ ಜನರೂ ಟಿವಿಯಲ್ಲಿ ಬರುವ ಧಾರಾವಾಹಿಗಳು ಮತ್ತು ಕೆಟ್ಟ ರಿಯಾಲಿಟಿ ಶೋಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಯುವಕರು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೀರ್ತಿ ಯುವಕ ಸಂಘದ ನಾಗರಾಜು,ಹಳ್ಳಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಾಯಧನ ನೀಡಬೇಕು ಎಂದರು.
ಪ್ರಾಂಶುಪಾಲ ರತ್ನಾಕರ್, ದಲಿತ ಸಂಘರ್ಷ ಸಮಿತಿ ಮುಖಂಡ ಸೋಮಶೇಖರ್, ಟಿ.ಆರ್. ವಿಜಯಕುಮಾರ್ ಮಾತನಾಡಿದರು. ಜಗದೀಶ್, ವಸಂತ್ ಹಾಜರಿದ್ದರು.