ವಾಷಿಂಗ್ಟನ್ (ಪಿಟಿಐ): ಮಲಾಲಾ ಯೂಸುಫ್ಜೈ ಮೇಲೆ ದಾಳಿ ನಡೆಸಿದ ತೆಹ್ರಿಕ್-ಇ-ತಾಲಿಬಾನ್ ಸಂಘಟನೆಯ ಮುಖಂಡನ ಬಗ್ಗೆ ಮಾಹಿತಿ ನೀಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಘೋಷಿಸಿದ್ದಾರೆ.
`ಆಫ್ಘಾನಿಸ್ತಾನದಲ್ಲಿ ದಾಳಿ ಸಂಚು ರೂಪಿಸಲಾಗಿತ್ತು. ಮಲ್ಕಾಂಡ ಕಣಿವೆ ಪ್ರದೇಶದ ಮೇಲೆ ಕಾರ್ಯಾಚರಣೆ ನಡೆಸುವ ಹೊತ್ತಿಗೆ ತೆಹ್ರಿಕ್-ಇ-ತಾಲಿಬಾನ್ ಸಂಘಟನೆಯ ಮುಖಂಡ ಮುಲ್ಲಾ ಫಜಲುಲ್ಲಾ ಅಲ್ಲಿಂದ ಪರಾರಿಯಾಗಿದ್ದ. ಅಲ್ಲೇ ದಾಳಿ ಸಂಚು ನಡೆಸಲಾಗಿತ್ತು ಮತ್ತು ಅಲ್ಲಿಂದಲೇ ನಾಲ್ವರು ಬಂದಿದ್ದರು~ ಎಂದು ಮಲಿಕ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
`ಉಗ್ರರ ಮುಖ್ಯ ಗುರಿ ಮತ್ತು ದಾಳಿ ಸ್ವರೂಪ ತಿಳಿಯುವ ಹೊತ್ತಿಗೆ ಮಲಾಲಾ ಮೇಲೆ ದಾಳಿ ನಡೆದಿತ್ತು. ಇನ್ನೊಬ್ಬ ವ್ಯಕ್ತಿಯನ್ನುಗುರುತಿಸಲಾಗಿದ್ದು, ಆತನ ಕೆಲ ಸಹವರ್ತಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ~ ಎಂದು ಹೇಳಿದ್ದಾರೆ.
`ಫಜಲುಲ್ಲಾನನ್ನು ಬಂಧಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ನಮ್ಮ ಸೇನಾ ಪಡೆ ಮತ್ತು ಬೇಹುಗಾರಿಕಾ ಸಂಸ್ಥೆಗಳು ಆತನ ಹುಡುಕಾಟದಲ್ಲಿ ತೊಡಗಿವೆ~ ಎಂದೂ ಮಲಿಕ್ ತಿಳಿಸಿದ್ದಾರೆ.
ಲಂಡನ್ ವರದಿ: `ಮಲಾಲಾ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ~ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಬರ್ಮಿಂಗ್ಹ್ಯಾಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶೌರ್ಯ ಪ್ರಶಸ್ತಿ
ಮಲಾಲಾಗೆ ಶೌರ್ಯ ಪ್ರಶಸ್ತಿ (ಸಿತಾರಾ-ಇ- ಶುಜಾತ್) ನೀಡಲಾಗುತ್ತದೆ ಎಂದು ಸಚಿವ ಮಲಿಕ್
ತಿಳಿಸಿದ್ದಾರೆ.
`ನಾಗರಿಕ ಸಮಾಜದ ಮೇಲೆ ನಡೆಸಿದ ದಾಳಿ~
ಬಾಕು (ಎಎಫ್ಪಿ): `ಮಲಾಲಾ ಯೂಸುಫ್ಜೈ ಮೇಲಿನ ದಾಳಿಯು ದೇಶದಲ್ಲಿರುವ ಎಲ್ಲ ಬಾಲಕಿಯರು ಮತ್ತು ನಾಗರಿಕತೆ ಮೇಲೆ ನಡೆಸಿದ ದಾಳಿ~ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.
`11 ವರ್ಷದವಳಿದ್ದಾಗಲೇ ಬಾಲಕಿಯರ ಶಿಕ್ಷಣದ ಹಕ್ಕಿಗಾಗಿ ಹೋರಾಟ ಪ್ರಾರಂಭಿಸಿದ್ದ ಮಲಾಲಾ ಮೇಲೆ ತಾಲಿಬಾನ್ ಉಗ್ರರು ನಡೆಸಿದ್ದ ದಾಳಿಯು ನಾಗರಿಕ ಸಮಾಜದ ಮೇಲೆ ನಡೆಸಿದ ದಾಳಿ~ ಎಂದು ಜರ್ದಾರಿ ಮಂಗಳವಾರ ಇಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.