ಜಯಪುರ (ಬಾಳೆಹೊನ್ನೂರು): ಪುಷ್ಯೆ ಮಳೆಯ ಆರ್ಭಟ ಶುಕ್ರವಾರವೂ ಮುಂದುವರೆದಿದ್ದು ಹಲವಡೆ ಸರಣಿ ಭೂ ಕುಸಿತ ಸಂಭವಿಸಿ ಹಾನಿ ಉಂಟಾಗಿದೆ.
ಶುಕ್ರವಾರವೂ ಮಳೆಯ ಅಬ್ಬರ ಮುಂದುವರೆದಿದೆ. ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜ್ಯೋತಿಕೊಡಿಗೆ ಶಿವಶಂಕರರಾವ್ ಅವರ ತೋಟದ ಸುಮಾರು 100ಕೂ ಹೆಚ್ಚು ಅಡಿಕೆ ಮತ್ತು ಕಾಫಿ ಗಿಡಗಳು ಭಾರಿ ಮಳೆಯ ಕಾರಣ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ.
ಇದರ ಪರಿಣಾಮ ಹಳ್ಳ ದಿಕ್ಕನ್ನು ಬದಲಿಸಿ ಪಕ್ಕದ ತೋಟದ ಮೇಲೆ ಹರಿಯುತ್ತಿದ್ದು ಮತ್ತಷ್ಟು ಹಾನಿ ಸಂಭವಿಸಿದೆ. ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎನ್ನುತ್ತಾರೆ ಶಿವಶಂಕರರಾವ್ ಅವರ ಪುತ್ರ ಗುರುಪ್ರಸಾದ್.
ರಸ್ತೆ ಸಂಪರ್ಕ ಸ್ಥಗಿತ: ಸಾತ್ಕೊಡಿಗೆ ಮೂಲಕ ಕಲ್ಲುಗುಡ್ಡೆ ಹೊರನಾಡು ಸಂಪರ್ಕ ಕಲ್ಪಿಸುವ ರಸ್ತೆ ಸಾತ್ಕೊಡಿಗೆ ಸಮೀಪ ಸಂಪೂರ್ಣ ಕುಸಿದಿದ್ದು ಬಸ್ ಸೇರಿದಂತೆ ಯಾವುದೇ ವಾಹನ ಸಂಚಾರ ಇಲ್ಲಿ ಸಾಧ್ಯವಿಲ್ಲದಂತಾಗಿದೆ. ಕೊಗ್ರೆ -ಮೇಗೂರು ರಸ್ತೆಯ ಜೈನ ಬಸದಿ ಸಮೀಪ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಕೊಗ್ರೆ-ಬೆಂಡೆಹಕ್ಕಲು ರಸ್ತೆಯಲ್ಲೂ ಮಣ್ಣು ಕುಸಿದು ಅವ್ಯವಸ್ಥೆ ಉಂಟಾಗಿದೆ.
ವಿಶೇಷವೆಂದರೆ ಇಷ್ಟೆಲ್ಲಾ ಸರಣಿ ಅನಾಹುತಗಳು ಸಂಭವಿಸಿದರೂ ಯಾವುದೇ ಅಧಿಕಾರಿ ಇತ್ತ ಸುಳಿದಿಲ್ಲ ಎಂಬುದು ಗ್ರಾಮಸ್ಥರ ಅಳಲು.