ಶಿವಮೊಗ್ಗ: ಮಲೆನಾಡಿನಲ್ಲಿ ಮಳೆ ದುರ್ಬಲಗೊಂಡಿದ್ದು, ಜಿಲ್ಲಾದ್ಯಂತ ಸೋಮವಾರ ಸಾಧಾರಣ ಮಳೆಯಾಗಿದೆ.
ತೀರ್ಥಹಳ್ಳಿಯಲ್ಲಿ 36.4 ಮಿ.ಮೀ. ಮಳೆಯಾಗಿದ್ದರೆ, ಆಗುಂಬೆಯಲ್ಲಿ 74.6 ಮಿ.ಮೀ. ಸುರಿದಿದೆ. ಹೊಸನಗರದಲ್ಲಿ 6.2 ಮಿ.ಮೀ, ಸೊರಬ 8.2, ಶಿಕಾರಿಪುರ 2.4, ಸಾಗರ 8.0, ಶಿವಮೊಗ್ಗ 9.8, ಭದ್ರಾವತಿ 8.6 ಮಿ.ಮೀ. ಮಳೆಯಾಗಿದೆ. ಹೊಸನಗರದ ಹುಲಿಕಲ್ನಲ್ಲಿ 75 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 64 ಮಿ.ಮೀ. ಹಾಗೂ ಯಡೂರುನಲ್ಲಿ 64 ಮಿ.ಮೀ. ಮಳೆಯಾಗಿದೆ.
ಲಿಂಗನಮಕ್ಕಿ ಸುತ್ತಮುತ್ತ 24 ಮಿ.ಮೀ. ಮಳೆಯಾದ ಪರಿಣಾಮ ಒಳಹರಿವು 9,000 ಕ್ಯೂಸೆಕ್ಗೆ ಏರಿದೆ. ಭದ್ರಾ ಜಲಾಶಯದ ಸುತ್ತಮುತ್ತ 5.6 ಮಿ.ಮೀ. ಮಳೆಯಾಗಿ, ಒಳಹರಿವು 4,447 ಕ್ಯೂಸೆಕ್ಗೆ ಏರಿಕೆಯಾಗಿದೆ.
ಹಾಗಾಗಿ ನೀರಿನ ಮಟ್ಟದಲ್ಲಿ ಒಂದು ಅಡಿ ಹೆಚ್ಚಳವಾಗಿದ್ದು, ಅದು 146 ಅಡಿ, 8 ಇಂಚಿಗೆ ಏರಿದೆ.
ತುಂಗಾ ನದಿಪಾತ್ರದ ಜನರಿಗೆ ಎಚ್ಚರಿಕೆ: ತುಂಗಾ ಅಣೆಕಟ್ಟಿನ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಆಗುತ್ತಿದ್ದು, ಒಳಹರಿವು ಹೆಚ್ಚಾಗುತ್ತಿರುವುದರಿಂದ, ಹೆಚ್ಚುವರಿ ನೀರನ್ನು ಅಣೆಕಟ್ಟೆಯ ಎಲ್ಲಾ ಗೇಟುಗಳಿಂದ ತುಂಗಾ ನದಿಗೆ ಯಾವುದೇ ಸಂದರ್ಭದಲ್ಲಿ ಹೊರಬಿಡಲಾಗುವುದು. ಆದ ಕಾರಣ ತುಂಗಾ ನದಿಪಾತ್ರದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ತುಂಗಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.