ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾಹಿತಿ
ಶಿವಮೊಗ್ಗ: `ಮಲೆನಾಡು ಗಿಡ್ಡ~ ಜಾನುವಾರು ತಳಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ಮಾನ್ಯತೆ ಸಿಕ್ಕಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ರಾಜ್ಯ ಜೀವವೈವಿಧ್ಯ ಮಂಡಳಿ ಮಾನ್ಯತೆ ನೀಡಬೇಕು ಎಂದು ಕಾರ್ಯಪಡೆ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಪರಿಸರ ಸಚಿವರು ಈ ಪ್ರಸ್ತಾವಕ್ಕೆ ಅಂಗೀಕಾರ ನೀಡಿದ್ದಾರೆ. ಈಚೆಗೆ ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವೈವಿಧ್ಯ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
`ಮಲೆನಾಡು ಗಿಡ್ಡ~ವು ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಡಿಮೆ ಆಹಾರ ಸೇವನೆ, ಅಧಿಕ ರೊಗನಿರೋಧಕ ಶಕ್ತಿ ಹೀಗೆ ಹಲವು ವಿಶೇಷ ಒಳಗೊಂಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ `ಮಲೆನಾಡು ಗಿಡ್ಡ~ ತಳಿ ಸಂಶೋಧನೆಗೆ ್ಙ 1 ಕೋಟಿ ಅನುದಾನವನ್ನು ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ನೀಡಿದೆ. ಜಿಲ್ಲೆಯಲ್ಲಿ `ಮಲೆನಾಡು ಗಿಡ್ಡ~ ತಳಿ ಸಂಶೋಧನೆಗೆ ಹೆಚ್ಚು ಅವಕಾಶ ಸಿಕ್ಕಂತಾಗಿದೆ. ಬೀದರ್ನ ಪಶು ವೈದ್ಯಕೀಯ ವಿವಿ ಹಾಗೂ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜು ಜತೆಗೆ `ಮಲೆನಾಡು ಗಿಡ್ಡ~ ಜಾನುವಾರು ತಳಿ ಸಂರಕ್ಷಣೆ ಹಾಗೂ ಸಂಶೋಧನೆ ಕುರಿತು ಸಭೆ ನಡೆಸಲಾಗುವುದು ಎಂದು ಹೇಳಿದರು.
ಸದ್ಯದಲ್ಲೇ `ಮಲೆನಾಡು ಗಿಡ್ಡ~ ಸಂರಕ್ಷಣೆ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ನಡೆಸಲು ಸಹ ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗಾಂಧಿ ಜಯಂತಿ ಅಂಗವಾಗಿ ಕಾರ್ಯಕ್ರಮ: ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಜೋಗದ ಮಾವಿನಗುಂಡಿಯ ಶರಾವತಿ ಕಣಿವೆಯ ಫ್ರೀಡಂ ಪಾರ್ಕ್ನಲ್ಲಿ ಅ. 2ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದೆ. ಯುವಜನ ಶಿಬಿರ-ಹಸಿರು ಓಟ, ಮಾವಿನಗುಂಡಿ, ಫ್ರೀಡಂ ಪಾರ್ಕ್ನಲ್ಲಿ ಪುಸ್ತಕಗಳ ಬಿಡುಗಡೆ ಸಮಾರಂಭ, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಾಮನ ಆಚಾರ್ಯ ಉದ್ಘಾಟಿಸಲಿದ್ದು, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅನಂತ ಹೆಗಡೆ ಅಶೀಸರ, ಸಚ್ಚಿದಾನಂದ ಹೆಗಡೆ, ಶಾಂತಾ ಈಶ್ವರ ಹಸ್ಲರ, ಕೆ.ಜಿ. ನಾಯ್ಕ, ಪ್ರಸನ್ನ ಎಸ್. ಹೆಗಡೆ, ರಾಧಾ ಜಿ. ನಾಯ್ಕ, ಈಶ್ವರ ಎಸ್. ನಾಯ್ಕ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.