ನವದೆಹಲಿ (ಐಎಎನ್ಎಸ್): ಪಾಕಿಸ್ತಾನದಲ್ಲಿ ಭಾನುವಾರ ನಡೆದ ಉಗ್ರ ಅಫ್ಜಲ್ ಗುರು ಶೋಕಾಚರಣೆ ಕಾರ್ಯಕ್ರಮದಲ್ಲಿ ಮುಂಬೈ ದಾಳಿ ರೂವಾರಿ ಹಾಗೂ ಲಷ್ಕರ್ -ಎ -ತೊಯಿಬಾ ಮುಖ್ಯಸ್ಥ ಹಫೀಜ್ ಸಯ್ಯದ್ ಜತೆ ವೇದಿಕೆ ಹಂಚಿಕೊಂಡ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಮುಖ್ಯಸ್ಥ ಯಾಸಿನ್ ಮಲ್ಲಿಕ್ ವಿರುದ್ಧ ಕೇಂದ್ರ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮಂಗಳವಾರ ಆಗ್ರಹಿಸಿದರು.
`ಇದೊಂದು ಸಾಮಾನ್ಯ ವಿಷಯವಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಸರ್ಕಾರದ ಕ್ರಮವನ್ನು ನಾನು ಎದುರು ನೋಡುತ್ತೇನೆ' ಎಂದು ಹೇಳಿದರು.
ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಮಾತನಾಡಿ `ಮಲ್ಲಿಕ್ಗೆ ಪಾಕಿಸ್ತಾನಕ್ಕೆ ಹೋಗಲು ಅನುಮತಿ ನೀಡಿದ್ದು ಗೃಹ ಸಚಿವಾಲಯದ ಲೋಪ. ಈ ಕುರಿತು ಬಿಜೆಪಿ ಎಲ್ಲ ವೇದಿಕೆಗಳಲ್ಲಿ ಧ್ವನಿ ಎತ್ತಲಿದೆ' ಎಂದರು.