ಮಡಿಕೇರಿ: ಸೂರ್ಯ ನೆತ್ತಿಮೇಲೆ ಬರುವ ಹೊತ್ತು. ‘ಹೆಜ್ಜೆಗಳ ಟ್ರಾಫಿಕ್ ಜಾಮ್’- ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಪುಸ್ತಕಗಳ ಮಳಿಗೆಗಳಲ್ಲಿ ನಡು ಮಧ್ಯಾಹ್ನ ಕಂಡ ಚಿತ್ರವಿದು.
ಸಾಮಾನ್ಯವಾಗಿ ಉತ್ಸವ, ಮೇಳಗಳ ಪುಸ್ತಕಗಳ ಮಳಿಗೆಗಳ ಸ್ಥಳದಲ್ಲಿ ನಿತ್ಯವೂ ಅವುಗಳ ಪ್ರವೇಶವನ್ನು ಬದಲಿಸುವ ಪರಿಪಾಠ ಇದೆ. ಇಲ್ಲಿ ಆಯೋಜಕರು ಅದಕ್ಕೆ ವ್ಯತಿರಿಕ್ತವಾದ ನಿಲುವು ತಳೆದರು. ಹಾಗಾಗಿ ಪ್ರವೇಶ ದ್ವಾರದಿಂದ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿರುವ ಸಪ್ನಾ ಬುಕ್ ಹೌಸ್ನ ದೊಡ್ಡ ಮಳಿಗೆಯ ಎದುರು ಜನ ನಿಲ್ಲುತ್ತಿದ್ದರು. ಅದಕ್ಕೆ ಸಮೀಪದಲ್ಲೇ ಕಾಫಿ ಮಂಡಳಿಯ ಮಳಿಗೆ ಇದ್ದು, ಅಲ್ಲಿ ಕಾಫಿಯ ರುಚಿ ಸವಿಯುವವರ ಸಾಲು. ಹೀಗಾಗಿ ಪ್ರವೇಶಿಸಿ, ಸುತ್ತಿ ಬಳಸಿ ಒಂದಿಷ್ಟು ಸಾಲುಗಳನ್ನು ಹಾದು ಪುಸ್ತಕ ಅಥವಾ ತಮ್ಮಿಷ್ಟದ ವಸ್ತುಗಳನ್ನು ಕೊಂಡವರು ಹೊರನಡೆಯಬೇಕಿತ್ತು. ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಪುಸ್ತಕ ಮಳಿಗೆಗಳ ಕೆಲವರು ದೂರಲು ಇದೇ ಕಾರಣ.
ಪುಸ್ತಕಳ ಮಳಿಗೆಗಳತ್ತ ಪ್ರವೇಶಿಸಿದೊಡನೆ ಕಾಣುವ ಸೈ ಫೈ ಅನಿಮೇಷನ್ನಲ್ಲಿ ‘ಆನೆ ಬಂತೊಂದಾನೆ’ ಶೀರ್ಷಿಕೆಯ ಕನ್ನಡ ಶಿಶುಕತೆಗಳ ಡಿವಿಡಿ, ಸೀಡಿ ಮಾರಾಟ. ಒಂದೂವರೆ ದಿನದಲ್ಲೇ 150 ಡಿವಿಡಿ ಮಾರಿದ ಖುಷಿ ಮಳಿಗೆಯಲ್ಲಿದ್ದ ಸಂತೋಷ್ ಅವರದ್ದು. 15 ಮಕ್ಕಳ ಕತೆಗಳಿರುವ ಡಿವಿಡಿಯ ಜೊತೆಗೆ ಸೀಡಿಯನ್ನೂ ಅವರು ಉಚಿತವಾಗಿ ನೀಡುತ್ತಾರೆ. ₨150 ಬೆಲೆಗೆ (ಶೇ 50 ರಿಯಾಯಿತಿ) ಅವನ್ನು ಮಾರುತ್ತಿರುವುದರಿಂದ ಮಕ್ಕಳು ಅತ್ತ ಗಮನಹರಿಸುತ್ತಿದ್ದಾರೆ.
ನಿಮ್ಮದೇ ಅಂಚೆ ಚೀಟಿ: ಅಂಚೆ ಇಲಾಖೆಯ ಮಳಿಗೆ ಭಿನ್ನ ಕಾರಣಕ್ಕೆ ಗಮನ ಸೆಳೆಯುತ್ತದೆ. ಅಲ್ಲಿ ಜನರು ತಮ್ಮದೇ ಚಹರೆ ಇರುವ ಸ್ಟಾಂಪ್ಗಳನ್ನು ಹಣ ಕೊಟ್ಟು ಪಡೆಯಬಹುದು. ₨300 ಕೊಟ್ಟರೆ, ₨60 ಮೊತ್ತದ ತಲಾ ₨5 ಬೆಲೆಯ12 ಸ್ಟಾಂಪ್ಗಳನ್ನು ಇಲಾಖೆಯವರು ಕೊಡುತ್ತಾರೆ. ತಮ್ಮದೇ ಚಿತ್ರವಿರುವ ಸ್ಟಾಂಪನ್ನು ಲಕೋಟೆಗೆ ಅಂಟಿಸಿ, ಬಂಧು-ಮಿತ್ರರೊಡನೆ ಪತ್ರ ವ್ಯವಹಾರ ಮಾಡುವ ಅವಕಾಶ ಸಮ್ಮೇಳನಕ್ಕೆ ಬಂದ ಸಹೃದಯರದ್ದು.
‘ಕಳೆದ ವರ್ಷದಿಂದ ತಮ್ಮದೇ ಭಾವಚಿತ್ರವಿರುವ ಲಕೋಟೆಯನ್ನು ಪಡೆಯುವ ಅವಕಾಶವನ್ನು ಅಂಚೆ ಇಲಾಖೆಯು ನಾಗರಿಕರಿಗೆ ಕಲ್ಪಿಸಿದೆ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಈ ಸಮ್ಮೇಳನದಲ್ಲಿ ಇದುವರೆಗೆ ಹತ್ತು ಮಂದಿ ಹಣ ಕೊಟ್ಟು, ಎನ್ರೋಲ್ ಮಾಡಿಸಿದ್ದಾರೆ. ತಮ್ಮದೇ ಅಂಚೆಚೀಟಿಯನ್ನು ಪ್ರೀತಿಪಾತ್ರರಿಗೆ ಕಳುಹಿಸುವ ಈ ಅವಕಾಶಕ್ಕೆ ಇನ್ನೂ ಉತ್ತಮ ಪ್ರತಿಕ್ರಿಯೆ ಸಿಗಬೇಕು. ಮೈಸೂರು ದಸರಾದಲ್ಲೂ ಇಂಥದ್ದೊಂದು ಮಳಿಗೆ ಹಾಕಿದ್ದೆವು. ಇನ್ನೂ ಒಂದೂವರೆ ದಿನ ಉತ್ತಮ ಪ್ರತಿಕ್ರಿಯೆ ಬರಬಹುದು’ ಎಂದು ಅಂಚೆ ಇಲಾಖೆ ಸಿಬ್ಬಂದಿ ಸವಿತಾ ಪ್ರತಿಕ್ರಿಯಿಸಿದರು.
ನಿಘಂಟಿಗೆ ಜೈ: ಕನ್ನಡ ಸಾಹಿತ್ಯ ಪರಿಷತ್ನ ಮಳಿಗೆಯು ಪ್ರವೇಶದ ಭಾಗದಲ್ಲೇ ಇದ್ದು, ‘ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು’ ಹಾಗೂ ‘ಕನ್ನಡ ರತ್ನಕೋಶ’ದಂಥ ಪುಸ್ತಕಗಳಿಗೆ ಅಲ್ಲಿ ಬೇಡಿಕೆ ಹೆಚ್ಚು. ಇವಲ್ಲದೆ ಗದ್ಯಾನುವಾದಗಳಿಗೂ ಬೇಡಿಕೆ ಇದೆ ಎಂದು ಮಳಿಗೆಯಲ್ಲಿದ್ದ ಸಿಬ್ಬಂದಿ ನಾಗರತ್ನ ಹೇಳಿದರು. ಅಷ್ಟರಲ್ಲಿ ‘ವಡ್ಡಾರಾಧನೆ’ ಕೃತಿಯನ್ನು ಕೇಳಿಕೊಂಡು ಮಧ್ಯಮ ವಯಸ್ಸಿನ ಮಹಿಳೆ ಅಲ್ಲಿಗೆ ಬಂದರು.
‘ವ್ಯವಸ್ಥೆ ಸರಿ ಇಲ್ಲ’: ಕೇಂದ್ರ ಸಾಹಿತ್ಯ ಅಕಾಡೆಮಿಯ ಮಳಿಗೆಯಲ್ಲಿ ‘ಕೊಡಗಿನ ಗೌರಮ್ಮ’ ಪುಸ್ತಕಗಳು ಗೋಬಿ ಮಂಚೂರಿಯಂತೆ ಖರ್ಚಾಗುತ್ತಿವೆ. ಮಂಗಳವಾರ 30 ಪ್ರತಿಗಳನ್ನು ಮಾರಿದ ಹೆಮ್ಮೆ ಮಳಿಗೆಯ ಸಿ.ಎನ್.ರಾಜು ಅವರದ್ದು. ಅಲ್ಲಿಯೇ ಬಿಲ್ ಹಾಕುತ್ತಿದ್ದ ಚಂದ್ರಶೇಖರ ಅವರದ್ದು ವ್ಯವಸ್ಥೆ ಸರಿಯಾಗಿಲ್ಲ ಎಂಬ ದೂರು.
‘ಪ್ರವೇಶವನ್ನು ನಿತ್ಯ ಬದಲಾಯಿಸಬೇಕು. ಇದರಿಂದ ಬರುವ ಗ್ರಾಹಕರಿಗೆ ವೈವಿಧ್ಯಮಯ ಕೃತಿ ನೋಡುವ, ಕೊಳ್ಳುವ ಅವಕಾಶ ಸಿಕ್ಕಂತಾಗುತ್ತದೆ. ಎಲ್ಲಾ ಮಳಿಗೆಯವರಿಗೆ ನ್ಯಾಯ ಒದಗಿಸಿದಂತಾಗುತ್ತದೆ’. ಚಂದ್ರಶೇಖರ ಅವರು ದೂರುಗಳ ಪಟ್ಟಿ ಮುಂದುವರಿಸುವ ವೇಳೆಗೆ ರಂ.ಶ್ರೀ.ಮುಗಳಿಯವರ ‘ಕನ್ನಡ ಸಂಕ್ಷಿಪ್ತ ಕಾವ್ಯ’ ಕೃತಿಗೆ ಗ್ರಾಹಕರೊಬ್ಬರು ಬೇಡಿಕೆಯಿಟ್ಟು, ಮಾತನ್ನು ಮೊಟಕುಗೊಳಿಸಿದರು.
*ಕೊಡಗಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ಸಮ್ಮೇಳನದಲ್ಲಿ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಕನ್ನಡ ದೇಶಿ ಪರಂಪರೆ ಹೆಸರಿನ ಛಾಯಾಚಿತ್ರ ಪ್ರದರ್ಶನದಲ್ಲಿ ಕೊಡಗು ಸಂಸ್ಕೃತಿಗೆ ಸಂಬಂಧಪಟ್ಟ 150 ಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.