ಕಳೆದ ಒಂದು ವಾರದಿಂದ ಬಯಲುಸೀಮೆಯ ತುಮಕೂರು, ಚಿತ್ರದುರ್ಗ, ಕೋಲಾರ, ರಾಯಚೂರು, ದಾವಣಗೆರೆ, ವಿಜಾಪುರ ಮುಂತಾದ ಜಿಲ್ಲೆಗಳಲ್ಲಿ ದಾಖಲೆ ಮಳೆ ಸುರಿದಿದೆ. ಮುಂಗಾರಿನಲ್ಲಿ ಬಿತ್ತಿದ್ದ ಜೋಳ, ರಾಗಿ, ಶೇಂಗಾ, ಮೆಣಸು, ಹತ್ತಿ, ಹೆಸರು, ಉುದ್ದು ಮುಂತಾಗಿ ಒಣಗಿ ಹೋದವು. ಆದರೆ ಕೆಲವರು ಕೊಳವೆಬಾವಿ ಮತ್ತು ನಾಲೆ ನೀರಿನ ಆಶ್ರಯದಲ್ಲಿ ಅಷ್ಟಿಷ್ಟು ರಾಗಿ, ಜೋಳ, ಶೇಂಗಾ, ಈರುಳ್ಳಿ, ತರಕಾರಿ, ಬಟನ್ ಹೂವು, ಸೇವಂತಿ, ಕಾಕಡ ಮುಂತಾಗಿ ಬೆಳೆದುಕೊಂಡು ಜೀವನಾಧಾರ ಮಾಡಿಕೊಂಡಿದ್ದರು. ಆದರೆ ಈಗ ಹಿಡಿದ ಮಳೆಗೆ ರಾಗಿ ನೆಲಕಚ್ಚಿ ಹೂವಿನ ಗಿಡಗಳು ನೆಲಕ್ಕೆ ಬಾಗಿ ಹಾಳಾಗಿ ಹೋಗುತ್ತಿವೆ.
ನೆಲ ಕಚ್ಚಿದ ರಾಗಿ ತೆನೆ ಮೊಳಕೆ ಬರುತ್ತಿದೆ. ಮೆಣಸಿನ ಗಿಡಗಳು ನೀರು ಹಿಡಿದು ಕೆಂಪಾಗುತ್ತಿವೆ. ನೆಲಗಡಲೆ ಎಲೆಗೆ ಮಣ್ಣು ಕೂತು ನೆಲ ಕಚ್ಚಿವೆ. ಒಟ್ಟಾರೆ ಕೈಗೆ ಬಂದದ್ದು ಬಾಯಿಗೆ ಬಾರದೆ ರೈತನ ಸ್ಥಿತಿ ಯಾವತ್ತಿನಂತೆ ಗತಿ ಗೋಳಾಟವಾಗುತ್ತಿದೆ.
ಇನ್ನೂ ದುರಂತವೆಂದರೆ, ಬಯಲುಸೀಮೆಯ ಹಳೇ ಮಾಳಿಗೆ ಮನೆಗಳು ನೆಂದು ಕುಸಿದು ಹೋಗುತ್ತಿವೆ. ಪ್ರಕೃತಿ ವಿಕೋಪ ಇಂತಾಗಿದೆ. ‘ಯಾತಕ್ಕೆ ಮಳೆ ಬಂದಾವೋ’! ಸರ್ಕಾರ ಓಗೊಡುವ ಕಾಲಕ್ಕೆ ಜನರ ಬದುಕು ಇನ್ನಷ್ಟು ಹದಗೆಡುತ್ತದೆ. ಬರದ ಸ್ಥಿತಿಯನ್ನು ‘ಪ್ರಜಾವಾಣಿ’ ವರದಿ ಮಾಡುತ್ತಿದೆ. ಒಟ್ಟಾರೆ ಮಳೆ ಇಷ್ಟು ದಿನ ಹೋಗಿ ಕೆಡಿಸಿತು. ಈಗ ಬಂದು ಕೆಡಿಸುತ್ತಿದೆ. ಸರ್ಕಾರ ತುರ್ತಾಗಿ ರೈತರ ನೆರವಿಗೆ ಬರಬೇಕು.