ಯಲಬುರ್ಗಾ: ತಾಲ್ಲೂಕಿನ ಬಂಡಿ, ಕಲಕಬಂಡಿ, ಕೊನಸಾಗರ, ವಜ್ರಬಂಡಿ, ಚಿಕ್ಕಬನ್ನಿಗೋಳ ಗ್ರಾಮಗಳಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಅಪಾರ ನಷ್ಟ ಸಂಭವಿಸಿದ್ದು, ಬಂಡಿ ರಸ್ತೆಗೆ ನಿರ್ಮಿಸಿದ್ದ ಕಿರು ಸೇತುವೆ ಕೊಚ್ಚಿಹೋಗಿದೆ.
ಸತತ ಎರಡು ದಿನಗಳ ಕಾಲ ಮಳೆ ಸುರಿದ ಪರಿಣಾಮ ಭಾರಿ ಪ್ರಮಾಣದಲ್ಲಿ ನೀರು ಹರಿದು ಸೇತುವೆ ಕೊಚ್ಚಿ ಹೋಗಿದೆ. ಚಿಕ್ಕಬನ್ನಿಗೋಳ ಹಾಗೂ ಕೊನಸಾಗರದಲ್ಲಿ ಮನೆಗಳಲ್ಲದೆ, ಕುರಿ, ಕೋಳಿ ಹಾಗೂ ಧಾನ್ಯಗಳು ಕೂಡ ಕೊಚ್ಚಿಹೋಗಿವೆ. ನೀರಿನ ರಭಸಕ್ಕೆ ರಸ್ತೆಯ ಅನೇಕ ಕಡೆಗಳಲ್ಲಿ ಕೊರಕಲು ಬಿದ್ದು ಸಂಚಾರಕ್ಕೂ ಅಡ್ಡಿಯುಂಟಾಗಿದೆ.
ಈ ರಸ್ತೆಯಲ್ಲಿ ಗ್ರಾನೈಟ್ ಕಲ್ಲು ತುಂಬಿಕೊಂಡ ಲಾರಿಗಳೇ ಹೆಚ್ಚಾಗಿ ತಿರುಗಾಡುತ್ತಿದ್ದು, ಯಾವುದೇ ಸಂದರ್ಭದಲ್ಲಿ ರಸ್ತೆಗಳು ಸಂಪೂರ್ಣ ಕುಸಿಯುವ ಸಾಧ್ಯತೆಗಳಿವೆ. ಸಂಬಂಧಪಟ್ಟವರು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಶರಣ ಬಸವರಾಜ ಮ್ಯಾಗೇರಿ ಒತ್ತಾಯಿಸಿದ್ದಾರೆ.