ಬಾಣಾವರ: ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಹೋಬಳಿಯಲ್ಲಿ ಇನ್ನೂ ಮಳೆರಾಯ ದೃಷ್ಟಿ ಹರಿಸಿಲ್ಲ. ಇದರಿಂದ ಕಂಗಲಾದ ರೈತರು ಬೆಳೆ ಉಳಿಸಿ ಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.
ಮೇ ತಿಂಗಳಲ್ಲಿ ಸುರಿದ ಮಳೆ ನಂಬಿ ಹೋಬಳಿಯ ತೊಂಡಿಗನಹಳ್ಳಿ, ಶ್ಯಾನೇಗೆರೆ, ಮನಕತ್ತೂರು, ಸುಳದಿಮ್ಮನಹಳ್ಳಿ, ಕೆಂಕೆರೆ, ಭಾಗಿಲುಘಟ್ಟ ಗ್ರಾಮಗಳ ರೈತರು ಟೊಮೆಟೊ ಸಸಿ ನಾಟಿ ಮಾಡಿದ್ದಾರೆ. ಆದರೆ, ಈಗ ಮಳೆ ಕೈಕೊಟ್ಟಿದೆ.
ಮತ್ತೊಂದೆಡೆ, ಮಳೆ ಕ್ಷೀಣಿಸುತ್ತಿರುವುದರಿಂದ ಅಂತರ್ಜಲದ ಮಟ್ಟ ಕುಸಿದು ಕೊಳವೆಬಾವಿಗಳೂ ಬತ್ತುತ್ತಿವೆ. ಹೀಗಾಗಿ, ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ತಲೆದೋರಿದೆ. ರೈತರು ಟ್ಯಾಂಕರ್ಗೆ 00-500 ರೂಪಾಯಿ ತೆತ್ತು ಬೆಳೆಗೆ ನೀರು ಹಾಯಿಸುತ್ತಿದ್ದಾರೆ.
`ಸಮಯಕ್ಕೆ ಸರಿಯಾಗಿ ಮಳೆಯಾಗದೇ ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ. ಪ್ರತಿವರ್ಷ ಸಾಲದ ಪ್ರಮಾಣ ಏರುತ್ತಲೇ ಇದೆ. ಶಾಶ್ವತ ನೀರಾವರಿ ಯೋಜನೆಯಲ್ಲಿ ಕೆರೆ ಕಟ್ಟೆಗಳಾದರೂ ತುಂಬಿದರೆ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದ ಕೊಳವೆಬಾವಿ ಆಶ್ರಯದಲ್ಲಿ ಕೃಷಿ ಮುಂದುವರಿಸಬಹುದು. ಇಲ್ಲದಿದ್ದರೆ ರೈತರು ಮುಂದೆ ಕೃಷಿಯನ್ನೇ ತೊರೆಯುವ ಯೋಚನೆ ಮಾಡಬಹುದು' ಎಂದು ರೈತ ಕೋಟಿ ಸೋಮಣ್ಣ ಆತಂಕ ವ್ಯಕ್ತಪಡಿಸಿದರು.
`ಬೆಳೆ ನಷ್ಟ ಪರಿಹಾರ ಒದಗಿಸಲು ಶಾಸಕರು ಮಧ್ಯ ಪ್ರವೇಶಿಸಬೇಕು. ನುಸಿ ಬಿದ್ದ ತೆಂಗು ಮತ್ತು ಟೊಮೆಟೊ ಬೆಳೆಯಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು' ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮಸುಂದರ್ ಆಗ್ರಹಿಸಿದ್ದಾರೆ.